ಬೆಂಗಳೂರು, ನ. 19– ಮೈಸೂರು ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಪ್ರದೇಶ ಪಕ್ಷವಾಗಿ ಪರಿವರ್ತನೆಯಾಗುವ ಸಂಭವವಿದೆಯೇ?
ಪಕ್ಷದ ನಾಯಕರಲ್ಲಿ ಪಕ್ಷದ ಭವಿಷ್ಯದ ಸ್ವರೂಪ ಹಾಗೂ ಮಾರ್ಗ ಕುರಿತು ನಡೆಯುತ್ತಿರುವ ತೀವ್ರ ಚರ್ಚೆಯಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪದಲ್ಲಿದೆ.
ಎಲ್ಲ ದೃಷ್ಟಿಗಳಿಂದ ಈ ಮಾರ್ಗ ಸೂಕ್ತವೆಂದೆನಿಸಿದರೆ, ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸನ್ನು ಪ್ರದೇಶ ಪಕ್ಷವನ್ನಾಗಿ ಏಕೆ ಪರಿವರ್ತಿಸಬಾರದು ಎಂಬ ಯೋಚನೆ ಹೊಸದೇನೂ ಅಲ್ಲ.
ಕಳ್ಳತನ ಕಲಿಸುವ ಶಾಲೆ!
ಮದರಾಸು, ನ. 19– ಚಿಕ್ಕ ಹುಡುಗರಿಗೆ ಕಳ್ಳತನದಲ್ಲಿ ಶಿಕ್ಷಣ ನೀಡುವ ತರಬೇತಿ ಶಾಲೆಯೊಂದನ್ನು ತಮಿಳುನಾಡಿನ ತಿರುಚಿನಾಪಳ್ಳಿಯ ತಿರುಪೆರಂಬೂರಿನಲ್ಲಿ ವೃತ್ತಿಗೆ ಹಳಬರಾದವರು ಹಾಗೂ ಖದೀಮ ಅಪರಾಧಿಗಳು ನಡೆಸುತ್ತಿದ್ದಾರೆ.
ಕಳೆದ ಶುಕ್ರವಾರ ಇಲ್ಲಿನ ಸೆಂಟ್ರಲ್ ಸ್ಟೇಷನ್ನಿನಲ್ಲಿ ಹನ್ನೆರಡು ವರ್ಷದ ಬಾಲಕರನ್ನು ಬಂಧಿಸಿದಾಗ ನಗರದ ರೈಲ್ವೆ ಪೊಲೀಸರಿಗೆ ಈ ‘ಶಾಲೆ ಇರುವುದರ’ ಸುಳಿವು ಗೊತ್ತಾಯಿತು.
ತಿರುಪೆರಂಬೂರಿನಲ್ಲಿ ತಮಗೆ ಮತ್ತು ಇತರ ಬಾಲಕರಿಗೆ ತರಬೇತಿ ನೀಡಿ ‘ವೃತ್ತಿಯಲ್ಲಿ ಹಿರಿಯರಾದವರಿಗೆ’ ನೆರವು ನೀಡಲು ಮದರಾಸಿಗೆ ಕಳುಹಿಸಲಾಯಿತೆಂದು ಬಾಲಕರು ಪೊಲೀಸರಿಗೆ ತಪ್ಪೊಪ್ಪಿಗೆ ನೀಡಿದ್ದಾರೆ.