ಬೆಂಗಳೂರು, ಏ. 10– ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತವನ್ನು ರಕ್ಷಿಸಲಾಗುವುದೆಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವ ಎಚ್.ಸಿದ್ಧವೀರಪ್ಪ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಈ ಸಂಬಂಧದಲ್ಲಿ ಯಾರೂ ಕಳವಳಪಡಬಾರದೆಂದು ಹೇಳಿದ ಸಚಿವರು, ಮಟ್ಟವನ್ನು ಉತ್ತಮಗೊಳಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದೆಂದರು.
ರಾಜ್ಯದ ಐದು ಮೆಡಿಕಲ್ ಕಾಲೇಜುಗಳಿಗೆ ಮಾನ್ಯತೆ ನೀಡಬಾರದೆಂದು ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿರ್ಣಯದ ಸಂಬಂಧದಲ್ಲಿ ತಾವು ಕೇಂದ್ರ ಸರ್ಕಾರದ ಆರೋಗ್ಯ ಸಚಿವರೊಡನೆ ಇತ್ತೀಚೆಗೆ ಮಾತುಕತೆ ನಡೆಸಿರುವುದಾಗಿ ಹೇಳಿದರು.
ಸಚಿವರ ಹೇಳಿಕೆ ಬಗ್ಗೆ ಅತೃಪ್ತಿ: ಸಭಾತ್ಯಾಗ
ಬೆಂಗಳೂರು, ಏ. 10– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಹಂಚಿಕೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಸಂಬಂಧದಲ್ಲಿ ಆಹಾರ ಸಚಿವರ ಹೇಳಿಕೆ ತೃಪ್ತಿಕರವಾಗಿಲ್ಲ ಎಂದು ಹೇಳಿ ಕಮ್ಯುನಿಸ್ಟ್ ಪಕ್ಷದ ಸದಸ್ಯ ರೊಬ್ಬರು ಇಂದು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.