ನವದೆಹಲಿ, ಆ. 29– ಉಪಖಂಡದಲ್ಲಿ ಸುಭದ್ರ ಶಾಂತಿ ಸ್ಥಾಪನೆಗಾಗಿ ಸಿಮ್ಲಾ ಒಪ್ಪಂದ ವನ್ನು ಅಕ್ಷರಶಃ ಹಾಗೂ ಮನಸಾ ಕಾರ್ಯಗತಗೊಳಿಸುವ ತಮ್ಮ ಸಂಕಲ್ಪವನ್ನು ಭಾರತ ಮತ್ತು ಪಾಕಿಸ್ತಾನಗಳು ಇಂದು ಪುನರುಚ್ಚರಿಸಿವೆ.
ಉಭಯ ರಾಷ್ಟ್ರಗಳ ನಡುವಿನ ಸಂದೇಹ ಗಳನ್ನು ಬಗೆಹರಿಸಿ ಒಪ್ಪಂದ ಅನುಷ್ಠಾನಗೊಳ್ಳುವಂತೆ ಮಾಡಲು ಅಧಿಕಾರಿಗಳು ಮಾತುಕತೆ ನಡೆಸಿದ ಬಳಿಕ ಇಂದು ನೀಡಿರುವ ಹೇಳಿಕೆಯಲ್ಲಿ ಈ ಸಂಕಲ್ಪ ವ್ಯಕ್ತಪಡಿಸಿದ್ದಾರೆ.
1971ರ ಡಿ. 17ರಂದು ಜಾರಿಗೆ ಬಂದ ಕದನವಿರಾಮವನ್ನು ಮಾನ್ಯಮಾಡಿದ್ದು, ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ತಮ್ಮ ತಮ್ಮ ಸರ್ಕಾರಗಳಿಗೆ ಶಿಫಾರಸು ಮಾಡಬೇಕೆಂಬುದು ಎರಡೂ ನಿಯೋಗಗಳು ತೆಗೆದುಕೊಂಡ ಇನ್ನೊಂದು ಮುಖ್ಯ ನಿರ್ಧಾರ.