ಪಕ್ಷಾಂತರ ಪ್ರವೃತ್ತಿ ಪ್ರಜಾಸತ್ತೆಗೆ ಅಪಾಯಕಾರಿ: ಮುಖ್ಯಮಂತ್ರಿ
ಬೆಂಗಳೂರು, ಡಿ. 13– ಪಕ್ಷಾಂತರ ಪ್ರವೃತ್ತಿಯಿಂದ ಪ್ರಜಾಸತ್ತೆಗೆ ಅಪಾಯವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಎಚ್ಚರಿಸಿದರು.
ಚರ್ಚೆ ನಿಲ್ಲಿಸುವ ಲಿಮಯೆ ಸಲಹೆಗೆ ಗೋವಿಂದ ಮೆನನ್ ವಿರೋಧ
ನವದೆಹಲಿ, ಡಿ. 13– ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರಲು ಸಂಸತ್ತಿಗೆ ಅಧಿಕಾರವನ್ನು ಪುನಃ ತಂದುಕೊಡಬೇಕೆನ್ನುವ ಪಿ.ಎಸ್.ಪಿ. ಸದಸ್ಯ ನಾಥಪೈ ಅವರ ರಾಜ್ಯಾಂಗ ತಿದ್ದುಪಡಿ ಮಸೂದೆ ಬಗ್ಗೆ ಇಂದು ಲೋಕಸಭೆಯಲ್ಲಿ ತೀವ್ರ ಅಭಿಪ್ರಾಯಭೇದ ಕಂಡು ಬಂದಿತು.
ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲವೆಂದು 1967ರ ಫೆಬ್ರುವರಿಯಲ್ಲಿ ಗೋಲಕನಾಥ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟ ನಂತರ ನಾಥ್ಪೈ ಮಂಡಿಸಿದ ಮಸೂದೆಗೆ ಸರ್ಕಾರ ತನ್ನ ತತ್ವಶಃ ಬೆಂಬಲ ವ್ಯಕ್ತಪಡಿಸಿದೆ.
ಪೂರ್ವ ಪಾಕಿಸ್ತಾನದಲ್ಲಿ ಅಯೂಬ್ ವಿರುದ್ಧ ಪ್ರದರ್ಶನ– ಗೋಲಿಬಾರ್
ಢಾಕಾ, ಡಿ. 13– ಅಧ್ಯಕ್ಷ ಅಯೂಬ್ಖಾನರ ಸರ್ಕಾರದ ವಿರುದ್ಧ ಪ್ರದರ್ಶನ ನಡೆಸಿದ ಗುಂಪುಗಳ ಮೇಲೆ ಪೊಲೀಸರು ಇಂದು ಗುಂಡು ಹಾರಿಸಿದರು.
ನಟಿಸಿ, ನಂಬಿಸಿ, ಮೋಸ
ಬೆಂಗಳೂರು, ಡಿ. 13– ಉತ್ತಮ ಬಟ್ಟೆಗಳನ್ನು ಧರಿಸಿದ ಯುವಕನೊಬ್ಬನು, ತಾನು ರಾಜ್ಯದ ವಿದ್ಯುತ್ ಮಂಡಳಿಯ ಪರ್ಚೇಸಿಂಗ್ ಅಧಿಕಾರಿಯಂತೆ ನಟಿಸಿ, ನಂಬಿಸಿ ನಗರದ ಫರ್ನಿಚರ್ ವ್ಯಾಪಾರಿಯೊಬ್ಬರಿಗೆ 2,875 ರೂಪಾಯಿಗಳಿಗೆ ಮೋಸ ಮಾಡಿದ ಪ್ರಕರಣ ವರದಿ ಆಗಿದೆ.
ನಕ್ಸಲೀಯ ನಾಯಕ ನಾರಾಯಣನ್ ಅವರ ಮನೆಯ ಶೋಧನೆ
ಕಲ್ಲಿಕೋಟೆ, ಡಿ. 13– ನಕ್ಸಲೀಯ ನಾಯಕ ಕುನ್ನಿಕ್ಕಲ್ ನಾರಾಯಣನ್ ಅವರ ಮನೆಯನ್ನು ಪೊಲೀಸರು ಇಂದು ಇಲ್ಲಿ ಶೋಧಿಸಿದರು.