ನವದೆಹಲಿ, ಡಿ. 16– ಪಾರ್ಲಿಮೆಂಟರಿ ಸ್ಥಾಯಿ ಸಮಿತಿಗಳನ್ನು ರಚಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸರ್ಕಾರ ಇಂದು ತಳ್ಳಿ ಹಾಕಿತಾದರೂ ಔಪಚಾರಿಕ ಸಲಹಾ ಸಮಿತಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಬರುವ ಸಲಹೆಗಳನ್ನು ಪರಿಶೀಲಿಸಲಾಗುವುದೆಂದು ಆಶ್ವಾಸನೆ ಇತ್ತಿತು.
ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳಿಗೆ ಸರ್ವೆ
ನವದೆಹಲಿ, ಡಿ. 16– ಕೊಟ್ಟೂರು– ಹರಿಹರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೆ, ಯಶವಂತ ನಗರದಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ರೈಲುಮಾರ್ಗದ ಸರ್ವೆಗಳನ್ನು 1969–70ರಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಸಿ.ಎಂ. ಪೂಣಚ್ಚ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.
ಹೆಗಡೆಯವರ ಎರಡು ಆಸೆ: ನಗರಕ್ಕೆ ಆಧುನಿಕ ಚಿತ್ರಾಲಯ, ರಂಗಮಂದಿರ ನಿರ್ಮಾಣ
ಬೆಂಗಳೂರು, ಡಿ. 16– ‘ನನ್ನ ಸಚಿವ ಸ್ಥಾನಾವಧಿ ಮುಗಿಯುವ ಮುನ್ನ ಕಾರ್ಯಗತಗೊಳಿಸಬೇಕಾದ ಎರಡು ಆಶಯಗಳು ನನಗಿವೆ. ಅವು ನಗರದಲ್ಲಿ ಪೂರ್ಣ ಸುಸಜ್ಜಿತ ಹಾಗೂ ಅತ್ಯಾಧುನಿಕ ಚಿತ್ರಾಲಯ ಮತ್ತು ರಂಗಮಂದಿರದ ನಿರ್ಮಾಣ’.
ಕಲಾವಿದರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ತಮ್ಮ ಈ ಆಶಯವನ್ನು ಇಂದು ಇಲ್ಲಿ ವ್ಯಕ್ತಪಡಿಸಿದರು ಅರ್ಥ ಹಾಗೂ ಯುವಜನ ಖಾತೆಯ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ ‘ನಾವು ನಾಲ್ವರು’ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿದ ಸಚಿವರು ‘ರವೀಂದ್ರ ಕಲಾಕ್ಷೇತ್ರ ಕಲಾವಿದರ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾದುದು ವಿಷಾದನೀಯ’ ಎಂದರು.
ಭಾರತಕ್ಕೆ 19 ಕೋಟಿ ರೂ. ಕೆನಡ ಗೋಧಿ
ನವದೆಹಲಿ, ಡಿ. 16– ಕೆನಡ ಸರ್ಕಾರವು ಭಾರತಕ್ಕೆ 19.05 ಕೋಟಿ ರೂಪಾಯಿ ಬೆಲೆಯ 1.5 ಕೋಟಿ ಬುಷೆಲ್ಗಳಷ್ಟು ಗೋಧಿ ಕೊಡಲು ಸಮ್ಮತಿಸಿರುವುದನ್ನು ಕೆನಡ ವಿದೇಶಾಂಗ ಕಾರ್ಯದರ್ಶಿ ಮೈಖೇಲ್ ಷಾರ್ಪ್ ಅವರು ಇಂದು ಒಟ್ಟಾವಾದಲ್ಲಿ ಪ್ರಕಟಿಸಿದರು.