ನವದೆಹಲಿ, ನ. 10 (ಯುಎನ್ಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ಇಂದು ಸರ್ವಾನುಮತದಿಂದ ತಿರಸ್ಕರಿಸಿದ ಚುನಾವಣಾ ಆಯೋಗ, ಅಲ್ಲಿ ಚುನಾವಣೆ ನಡೆಸಲು ಸದ್ಯಕ್ಕೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣೆ ಸಲಹೆಯನ್ನು ತಿರಸ್ಕರಿಸುವ ಈ ನಿರ್ಧಾರ ಸಂಪೂರ್ಣವಾಗಿ ಅವಿರೋಧವಾದದ್ದು, ಯಾವುದೇ ರೀತಿಯ ಭಿನ್ನಮತ ಇರಲಿಲ್ಲ ಎಂದು ಆಯೋಗದ ಸಭೆಯ ಬಳಿಕ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ತಿಳಿಸಿದರು.
ಸರ್ಕಾರದ ಜೊತೆ ಮಾತುಕತೆಗೆ ವೀರಪ್ಪನ್ ದೂತ
ಈರೋಡ್, ನ. 10 (ಪಿಟಿಐ)– ಕುಖ್ಯಾತ ಕಾಡುಗಳ್ಳ ಮತ್ತು ದಂತಚೋರ ವೀರಪ್ಪನ್ ತನ್ನ ಒತ್ತೆಯಲ್ಲಿರುವ ತಮಿಳುನಾಡಿನ ಮೂವರು ಅರಣ್ಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಪೆರಿಯಾರ್ ಜಿಲ್ಲಾಧಿಕಾರಿ ಎನ್.ಎಸ್.ಪಳನಿಯಪ್ಪನ್ ಅವರೊಂದಿಗೆ ಸಮಾಲೋಚಿಸಲು ದೂತನೊಬ್ಬನನ್ನು ಇಂದು ಕಳುಹಿಸಿದ್ದಾನೆ.
ವೀರಪ್ಪನ್ನೊಂದಿಗೆ ಸಂಧಾನ ನಡೆಸಲು ಇಂದು ಮಧ್ಯಾಹ್ನ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸರ್ಕಾರಿ ಪ್ರತಿನಿಧಿಯೊಂದಿಗೆ ಈತ ಬಂದಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.