ನವದೆಹಲಿ, ಜೂನ್ 24 (ಪಿಟಿಐ, ಯುಎನ್ಐ) – ಪಕ್ಷದ ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಜತೆ ಸಂಘರ್ಷಕ್ಕೆ ಇಳಿದರೆ ಪಕ್ಷವು ವಿಭಜನೆ ಯಾಗುವ ಸಾಧ್ಯತೆ ಇರುವ ಕಾರಣ, ಪದತ್ಯಾಗಕ್ಕೆ ಲಾಲೂ ಅವರ ಮನವೊಲಿಸುವುದೇ ಉಚಿತವೆಂಬ ನಿಲುವು ದಳದ ಹಿರಿಯ ಮುಖಂಡರದು ಎನ್ನಲಾಗಿದೆ.
ಮೇವು ಹಗರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ ಮೇಲೆ ನೈತಿಕ ಕಾರಣದಿಂದ ಲಾಲೂ ರಾಜೀನಾಮೆ ನೀಡಬೇಕು ಎಂದು ರೈಲ್ವೇ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಸಭೆ ಸೇರಿದ್ದ ಜನತಾದಳದ ಹಿರಿಯ ನಾಯಕರು ಅಭಿಪ್ರಾಯಪಟ್ಟರಾದರೂ ಈ ಹಂತದಲ್ಲಿ ಲಾಲೂ ಅವರನ್ನು ಏಕಾಂಗಿಯನ್ನಾಗಿ ಮಾಡಬಾರದು ಎಂಬ ನಿಲುವನ್ನೂ ತಳೆದರು ಎಂದು ದಳದ ಮೂಲಗಳು ತಿಳಸವೆ.
‘ಲಾಲೂ ಅವರನ್ನು ಮೂಲೆಗುಂಪು ಮಾಡಿ, ದಳದ ವಿಭಜನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.
ಕಾರು ಅಪಘಾತ: ಕಾಂಗ್ರೆಸ್ ಶಾಸಕ ಸಾವು
ಧಾರವಾಡ ಜೂನ್, 24 – ಧಾರವಾಡದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಕಾಂತ್ ರುದ್ರಪ್ಪ ಅಂಬಡಗಟ್ಟಿ ಅವರು ನಿನ್ನೆ ಮಧ್ಯರಾತ್ರಿ ಬೆಳಗಾವಿ–ಧಾರವಾಡ ರಸ್ತೆಯಲ್ಲಿ ತೇಗೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧರಾದರು.