ನವದೆಹಲಿ, ನವೆಂಬರ್ 28– ಸಂಯುಕ್ತರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಇಂದು ಸಂಜೆ ವಾಪಸು ಪಡೆದಿದ್ದರಿಂದಾಗಿ ಪ್ರಧಾನಿ ಐ.ಕೆ. ಗುಜ್ರಾಲ್ ನೇತೃತ್ವದ 7 ತಿಂಗಳ ಸರ್ಕಾರ ಪತನವಾಯಿತು. ಪ್ರಧಾನಿ ಗುಜ್ರಾಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು ರಾಷ್ಟ್ರಪತಿ ಅವರು ರಾತ್ರಿ ಅಂಗೀಕರಿಸಿದರು.
ಗುಜ್ರಾಲ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಇಂದು ರಾತ್ರಿ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ಅವರು ಮುಂದಿನ ವ್ಯವಸ್ಥೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಗುಜ್ರಾಲ್ ಅವರಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
lಯಾವ ಪಕ್ಷದ ಸರ್ಕಾರಕ್ಕೂ ಸಂಯುಕ್ತರಂಗದ ಬೆಂಬಲವಿಲ್ಲ
ನವದೆಹಲಿ, ನವೆಂಬರ್ 28– ಅಧಿಕಾರ ಕಳೆದುಕೊಂಡ 160 ಸದಸ್ಯ ಬಲವುಳ್ಳ ಹದಿನಾಲ್ಕು ಪಕ್ಷಗಳ ಸಂಯುಕ್ತರಂಗವು ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಪಡೆದು ರಚಿಸುವ ಯಾವುದೇ ಸರ್ಕಾರಕ್ಕೂ ತನ್ನ ಬೆಂಬಲವನ್ನು ನೀಡದಿರಲು ನಿರ್ಧರಿಸಿದೆ.
ಸಂಯುಕ್ತರಂಗದಲ್ಲಿನ ಪ್ರತಿ ಯೊಂದು ಪಕ್ಷದಿಂದ ಪಡೆದಿರುವ ಈ ಲಿಖಿತ ನಿರ್ಧಾರವನ್ನು ರಂಗದ ಸಂಚಾಲಕ ಎನ್.ಚಂದ್ರಬಾಬು ನಾಯ್ಡು ಅವರು, ರಂಗದ ಎಲ್ಲ ನಾಯಕರ ನಿಯೋಗವನ್ನು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಪತ್ರವೊಂದನ್ನು ಸಲ್ಲಿಸುವ ಮೂಲಕ ತಿಳಿಸಿದ್ದಾರೆ.