l ಶುದ್ಧೀಕರಿಸಬೇಕಾದ ವಿಷಯ ಏನೆಂಬುದು ಕೆಂಗಲ್ಗೇ ಇನ್ನೂ ಅಸ್ಪಷ್ಟ: ಇಂದಿರಾ
ತಿರುವನಂತಪುರ, ಸೆಪ್ಟೆಂಬರ್ 6– ಮೈಸೂರು ಕಾಂಗ್ರೆಸ್ನಲ್ಲಿ ಶುದ್ಧೀಕರಿಸಬೇಕಾದ ವಿಷಯಗಳಿವೆಯೆಂದು ಮನವರಿಕೆ ಯಾಗಿದ್ದರೆ, ಕೆಂಗಲ್ ಹನುಮಂತಯ್ಯನವರು ಆ ವಿಚಾರವನ್ನು ಇನ್ನೂ ಮೊದಲೇ ಕೇಂದ್ರ ನಾಯಕತ್ವದ ಗಮನಕ್ಕೆ ತರಬೇಕಾಗಿದ್ದಿತೆಂದು ಪ್ರಧಾನಿ ಇಂದಿರಾ ಗಾಂಧಿಯವರು ಇಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.
ಮಾಜಿ ರೈಲ್ವೆ ಸಚಿವ ಕೆಂಗಲ್ರವರ ‘ವ್ಯಾಪಕ (ಗುಡಿಸಿ ಚೊಕ್ಕಟ ಮಾಡುವ) ಸುಧಾರಣೆ’ ಕುರಿತು ಕೇಳಿದ ಪ್ರಶ್ನೆಗೆ ಪ್ರಧಾನಿ ಉತ್ತರವಿತ್ತು, ‘ಅವರು ಏನು ಗುಡಿಸಿ ಚೊಕ್ಕಟ ಮಾಡಬೇಕೆಂದಿದ್ದಾರೋ ನನಗೆ ತಿಳಿಯದು. ಅವರೂ ತಾವೇನು ಗುಡಿಸಿ ಶುಚಿ ಮಾಡಲಿದ್ದೇವೆಂಬುದನ್ನು ನಿರ್ದಿಷ್ಟಪಡಿಸಿಲ್ಲ’ ಎಂದರು.
l ಅರಬ್ ಕೈಬಾಂಬ್– ಗುಂಡಿಗೆ 9 ಸ್ಪರ್ಧಿಗಳು ಬಲಿ
ಮ್ಯೂನಿಕ್, ಸೆಪ್ಟೆಂಬರ್ 6– ಇಲ್ಲಿಗೆ ಸಮೀಪ ದಲ್ಲಿರುವ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಪಶ್ಚಿಮ ಜರ್ಮನಿ ಪೊಲೀಸರು ಮತ್ತು ಅರಬ್ ಗೆರಿಲ್ಲಾಗಳ ನಡುವೆ ನಡೆದ ಗುಂಡಿನ ಕಾಳಗದ ಫಲವಾಗಿ ಭಯೋತ್ಪಾದಕರು ಹಿಡಿದಿಟ್ಟುಕೊಂಡಿದ್ದ ಎಲ್ಲ ಒಂಬತ್ತು ಮಂದಿ ಇಸ್ರೇಲಿ ಆಟಗಾರರೂ ಹತರಾದರು. ಚಕಮಕಿಯಲ್ಲಿ ಐವರು ಅರಬ್ ಕಮಾಂಡೋಗಳೂ ಮಡಿದರು. ಮೂವರು ಅರಬ್ ಗೆರಿಲ್ಲಾಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.