ಕೇಂದ್ರ– ರಾಜ್ಯಗಳ ಬಾಂಧವ್ಯದ ಬಗ್ಗೆ ಅನಗತ್ಯ ತಪ್ಪು ಅಭಿಪ್ರಾಯ: ಇಂದಿರಾ
ಮದ್ರಾಸ್, ಸೆ. 27– ‘ರಾಜ್ಯಗಳ ಸ್ವಾಯತ್ತತೆ ಬೇಡಿಕೆ ಮುಖ್ಯವಾಗಿ ಆರ್ಥಿಕ ಪ್ರಶ್ನೆ. ಎಲ್ಲ ಅಧಿಕಾರ ಕೇಂದ್ರ ಸರ್ಕಾರಕ್ಕೇ ಇದೆ. ರಾಜ್ಯ ಗಳಿಗೆ ಯಾವ ಅಧಿಕಾರವೂ ಇಲ್ಲ ಎಂಬ ಮಿಥ್ಯಾಭಾವನೆಯನ್ನು ಸೃಷ್ಟಿಸಲಾಗುತ್ತಿದೆ’ ಎಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕೇಂದ್ರ– ರಾಜ್ಯಗಳ ಬಾಂಧವ್ಯದ ಬಗೆಗೆ ಅನವಶ್ಯಕವಾದ ತಪ್ಪು ಅಭಿಪ್ರಾಯಗಳು ಹೇರಳವಾಗಿ ಪ್ರಚಲಿತವಾಗಿವೆ. ಎಲ್ಲ ರಾಜ್ಯಗಳೂ ಹೇರಳವಾಗಿ ಹಣವನ್ನು ಕೇಳುತ್ತಿವೆ. ಇಷ್ಟು ಹೇರಳವಾಗಿ ಹಣ ನೀಡಿದರೂ ಅದರಿಂದ ಗೊಂದಲವೇ ಉದ್ಭವಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸಂಕೇತದ ಬದಲು ರಾಷ್ಟ್ರದ ಸಂಕೇತವಾಗಿ ಭಾರತಮಾತೆ
ಬೆಂಗಳೂರು, ಸೆ. 27– ರಾಜ್ಯ ಸಂಕೇತದ ಸ್ಥಾನದಲ್ಲಿ ರಾಷ್ಟ್ರೀಯ ಸಂಕೇತವನ್ನಿಡುವ ಉದ್ದೇಶದಿಂದ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಭಾರತಮಾತೆಯ ಚಿತ್ರವನ್ನು ಒಯ್ಯಲು ನಿರ್ಧರಿಸಲಾಗಿದೆ ಎಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ಭಾರತಮಾತೆಯ ಬದಲು ಶ್ರೀಚಾಮುಂಡೇಶ್ವರಿ ಚಿತ್ರದ ಮೆರವಣಿಗೆಯನ್ನು ನಡೆಸಬೇಕೆಂದು ಕೆಲವರು ಮಾಡಿರುವ ಸಲಹೆಯನ್ನು ಪ್ರಸ್ತಾಪಿಸಿದಾಗ ರಾಜ್ಯಪಾಲರು ಈಗ ಬದಲಾವಣೆಗೆ ಕಾಲವಿಲ್ಲವೆಂದರು.