ನವದೆಹಲಿ, ಮೇ 9– ಆದಾಯ ತೆರಿಗೆಯ ಶೇ 40ರ ಮಿತಿಯನ್ನು ಇಳಿಸಲು ನಿರಾಕರಿಸಿದ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕಪ್ಪು ಹಣವನ್ನು ಸ್ವಯಂ ಘೋಷಣೆ ಮೂಲಕ ಬಹಿರಂಗ ಪಡಿಸದೆ ತೆರಿಗೆ ವಂಚನೆ ಮುಂದುವರಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಚಿದಂಬರಂ ಉತ್ತರದ ನಂತರ ಲೋಕ ಸಭೆಯು 1997ನೇ ಸಾಲಿನ ಹಣಕಾಸು ಮಸೂದೆಗೆ ಒಪ್ಪಿಗೆ ನೀಡುವ ಮೂಲಕ 1997ನೇ ಸಾಲಿನ ಬಜೆಟ್ ಪ್ರಸ್ತಾವನೆಗಳಿಗೆ ವಿಧ್ಯುಕ್ತ ಒಪ್ಪಿಗೆ ನೀಡಿದಂತಾಗಿದೆ.
ವಿರೋಧ ಭಾರತೀಯ ಜನತಾ ಪಕ್ಷ ತಂದಿದ್ದ ಕೆಲವು ತಿದ್ದುಪಡಿಗಳನ್ನು ಲೋಕಸಭೆ ತಿರಸ್ಕರಿಸಿತು. ಮತ್ತೆ ಕೆಲವು ತಿದ್ದುಪಡಿಗಳನ್ನು ಆ ಪಕ್ಷವೇ ಹಿಂತೆಗೆದುಕೊಂಡಿತು.
ಆದರೆ, ಎಡಪಕ್ಷಗಳು ಬಜೆಟ್ನಲ್ಲಿಯ ಕೆಲವು ಮಾರ್ಪಾಡಿಗಾಗಿ ತಂದಿದ್ದ ತಿದ್ದುಪಡಿಯನ್ನು ಮತಕ್ಕೆ ಹಾಕಲು ಒತ್ತಾಯಿಸಲಿಲ್ಲ.
ಪೊಲೀಸ್ ಕ್ರಮ: ಠೇವಣಿದಾರರಿಗೆ 70 ಲಕ್ಷ ರೂ. ವಾಪಸ್
ಬೆಂಗಳೂರು, ಮೇ 9– ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿಯನ್ನು ಹಿಂತಿರುಗಿಸದೆ ಸತಾಯಿಸು ತ್ತಿದ್ದ ನಗರದ ಹಲವು ಖಾಸಗಿ ಹಣಕಾಸು ಸಂಸ್ಥೆಗಳಿಂದ ಎಪ್ಪತ್ತು ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಾಪಸ್ ಕೊಡಿಸಿದ್ದಾರೆ.