ಬೆಂಗಳೂರು, ನ.8 – ನಿತ್ಯ ಬಳಕೆ ವಸ್ತುಗಳಲ್ಲಿ ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ಸರ್ಕಾರದ ಕ್ರಮ ಮುಂದುವರಿಯುವುದು ಎಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ಹೇಳಿದರು.
ಐದು ವರ್ಷಗಳ ಹಿಂದೆ ಆರಂಭವಾದ ಬೆಂಗಳೂರಿನ ಜನತಾ ಬಜಾರಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ರಾಜ್ಯಪಾಲರು, ‘ಬೆಲೆ ಏರಿಕೆಯ ಬಿಕ್ಕಟ್ಟಿನ ಕಾಲದಲ್ಲಿ ಜನ್ಮ ತಾಳಿದ ಜನತಾ ಬಜಾರ್ನ ಕಾರ್ಯ ಮುಗಿದಿಲ್ಲ. ಬಿಕ್ಕಟ್ಟು ಇಂದೂ ಇದೆ. ಬೆಲೆ ಏರಿಕೆ ತಡೆಯುವಲ್ಲಿ ಅದು ವಹಿಸಬೇಕಾದ ಪಾತ್ರ ಅಪಾರವಿದೆ’ ಎಂದರು.