ಬೆಂಗಳೂರು, ಅಕ್ಟೋಬರ್ 18– ಐವತ್ತು ವರ್ಷಕ್ಕೂ ಹೆಚ್ಚು ಕಾಲ ಕನ್ನಡ ರಂಗಭೂಮಿಯ ಮೇಲೆ ರಾರಾಜಿಸಿದ್ದ ನಾಟಕ ರತ್ನ ಗುಬ್ಬಿ ವೀರಣ್ಣ ಅವರು ಇಂದು ಸಂಜೆ 5.45ರ ಸಮಯದಲ್ಲಿ ಇಲ್ಲಿ ನಿಧನರಾದರು.
83 ವರ್ಷ ವಯಸ್ಸಾಗಿದ್ದ ವೀರಣ್ಣ ಅವರು ಕಳೆದ ಒಂದರಂದು ಸೇಂಟ್ ಮಾರ್ತಾಸ್ ಆಸ್ಪತ್ರೆಗೆ ಸೇರಿದ್ದರು.
ರಾಜಕುಮಾರ್ ದುಃಖ
ಬೆಂಗಳೂರು, ಅಕ್ಟೋಬರ್ 18– ಗುಬ್ಬಿ ವೀರಣ್ಣ ಅವರ ನಿಧನದ ವಾರ್ತೆಯನ್ನು ಕೇಳಿ ಅತೀವ ದುಃಖಕ್ಕೀಡಾಗಿದ್ದ ಕನ್ನಡ ಚಲನಚಿತ್ರದ ಜನಪ್ರಿಯ ನಟ ರಾಜಕುಮಾರ್ ಅವರು, ‘ಮಾತನಾಡಲು ಕಷ್ಟ ಆಗುತ್ತೆ. ಏನನ್ನೂ ಹೇಳಲು ಚೈತನ್ಯ ಸಾಲದು’ ಎಂದು ತಮ್ಮ ಸಂತಾಪ ವ್ಯಕ್ತಪಡಿಸಿದರು.
ಮದರಾಸಿನಲ್ಲಿರುವ ಶ್ರೀಯುತರೊಡನೆ ಫೋನಿನ ಮೂಲಕ ಸಂಪರ್ಕ ಏರ್ಪಡಿಸಿದಾಗ ರಾಜಕುಮಾರ್ ಅವರು, ‘ಅವರ ಅನ್ನ ತಿಂದು ಬೆಳೆದವನು ನಾನು. ಅವರ ಹೆಸರನ್ನು ಹೇಳುತ್ತಲೇ ಬಾಳ್ತಾಯಿರೋದು. ಅವರು ಬಹಳ ದೊಡ್ಡ ವ್ಯಕ್ತಿ’ ಎಂದು ದಿವಂಗತರ ಗುಣಗಾನ ಮಾಡಿದರು.
ಡಿ.ಎಂ.ಕೆ. ಎರಡು ಹೋಳು: ಎಂ.ಜಿ.ಆರ್ ಅವರಿಂದ ಹೊಸ ಪಕ್ಷ ರಚನೆ
ಮದ್ರಾಸ್, ಅಕ್ಟೋಬರ್ 18– ‘ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ’ ಎಂಬ ಹೊಸ ಪಕ್ಷ ರಚಿಸಿರುವುದಾಗಿ ಎಂ.ಜಿ. ರಾಮಚಂದ್ರನ್ ಅವರ ಇಂದಿನ ಪ್ರಕಟಣೆಯೊಡನೆ ದ್ರಾವಿಡ ಮುನ್ನೇತ್ರ ಕಳಗಂ ವಿಧ್ಯುಕ್ತವಾಗಿ ಎರಡು ಹೋಳಾಗಿ ಸೀಳಿದಂತಾಗಿದೆ.