ಬೆಳಗಾವಿ, ಜುಲೈ 19–ಕೃಷ್ಣಾನದಿ ನೀರಿನ ಬಳಕೆಗೆ ಬಚಾವತ್ ಆಯೋಗ ವಿಧಿಸಿರುವ 2,000ನೇ ಇಸವಿ ಮಿತಿಯನ್ನು ವಿಸ್ತರಿಸುವಂತೆ ಕರ್ನಾಟಕ ಸರ್ಕಾರ ಕೇಳುವುದಿಲ್ಲ ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಇಂದು ಹಿಡಕಲ್ನಲ್ಲಿ ಸ್ಪಷ್ಟಪಡಿಸಿದರು.
ಘಟಪ್ರಭಾ ಜಲಾಶಯದ ತಟದಲ್ಲಿನ ಹುನ್ನೂರು ಪ್ರವಾಸಿ ಮಂದಿರದಲ್ಲಿ ವರದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ‘ಬದಲಿಗೆ ಕರ್ನಾಟಕ ಪಾಲಿನ 734 ಟಿ.ಎಂ.ಸಿಗಿಂತ ಹೆಚ್ಚುವರಿ ನೀರನ್ನು ಹಂಚಿಕೊಳ್ಳುವ ಕುರಿತು ಆಂಧ್ರದ ಮುಖ್ಯಮಂತ್ರಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆಗೆ ಮಾತುಕತೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಕೃಷ್ಣಾನದಿ ಮತ್ತು ಅದರ ಉಪನದಿಗಳು ಸೇರಿ ಈ ಶತಮಾನದ ಅಂತ್ಯದವರೆಗೆ 734 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಬೇಕು ಎಂದು ಬಚಾವತ್ ಆಯೋಗ ತೀರ್ಪು ನೀಡಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.