ಢಾಕಾ, ಜ. 14– ಬಾಂಗ್ಲಾ ದೇಶದಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದಿ ವ್ಯವಸ್ಥೆಯನ್ನು ರೂಪಿಸಲು ಯೋಜಿಸಲಾಗಿದೆಯೆಂದೂ, ಆರ್ಥಿಕ ರಂಗವನ್ನು ಪುನರ್ರಚಿಸುವ ಈ ವ್ಯವಸ್ಥೆಯಿಂದ ಈ ದೇಶವು ‘ಪೂರ್ವದ ಸ್ವಿಟ್ಜರ್ಲೆಂಡ್’ ಎನಿಸಿಕೊಳ್ಳುವುದೆಂದೂ ಪ್ರಧಾನಿ ಷೇಖ್ ಮುಜೀಬುರ್ ರೆಹಮಾನ್ ಆಶಿಸಿದ್ದಾರೆ.
ಉತ್ಪಾದನೆ ಏರಿಕೆಗೆ ಧಕ್ಕೆ ಬಾರದಂತೆ ದೇಶದಲ್ಲಿ ಸಮತಾವಾದಿ ಸಮಾಜ ಸ್ಥಾಪಿಸಿ, ತೆರಿಗೆ ವಿಧಾನಗಳ ಪುನರ್ರಚನೆಗೆ ಸರ್ಕಾರ ಪರಿಶೀಲಿಸುತ್ತಿದೆ.
ಸಕ್ಕರೆ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳೇ ಕಾರಣ: ಆರೋಪ
ನವದೆಹಲಿ, ಜ. 14– ಸಕ್ಕರೆ ಬೆಲೆ ಇತ್ತೀಚೆಗೆ ತೀವ್ರವಾಗಿ ಏರಿರುವುದಕ್ಕೆ ರಾಜ್ಯ ಸರ್ಕಾರಗಳೇ ಕಾರಣವೆಂದು ಸಕ್ಕರೆ ಕಾರ್ಖಾನೆಗಳ ಸಂಘ ಆಪಾದಿಸಿದೆ.
ಜನವರಿ 1ರಿಂದ ಸಕ್ಕರೆ ಮೇಲೆ ಭಾಗಶಃ ನಿಯಂತ್ರಣ ಜಾರಿಗೆ ಬಂದ ನಂತರ ಸಕ್ಕರೆಯ ಸಾಗಣೆಯಲ್ಲಿ ಅತೀವ ವಿಳಂಬವುಂಟಾದ ಕಾರಣ ನ್ಯಾಯ ಬೆಲೆ ಅಂಗಡಿ ಸಕ್ಕರೆ ಬಳಕೆದಾರರ ಕ್ಷೇತ್ರಗಳಿಗೆ ತಲುಪಲಿಲ್ಲವೆಂದೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಸಕ್ಕರೆ ವಿತರಣೆಗೆ ರಾಜ್ಯ ಸರ್ಕಾರಗಳು ಅಷ್ಟಾಗಿ ಆಸಕ್ತಿ ತೋರಿಲ್ಲವೆಂದೂ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷ ಶ್ರೀ ಬನ್ಸೀಧರ್ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.