ಜಾತೀಯತೆ, ಗುಂಪು ಭಾವನೆ ನಿರ್ಮೂಲಕ್ಕೆ ರಾಷ್ಟ್ರಪತಿ ಕರೆ
ನವದೆಹಲಿ, ಆ. 14 - ಐಕ್ಯತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹಕಾರ ತತ್ವಗಳ ಆಧಾರದ ಮೇಲೆ ಸುಬದ್ಧವಾದ ಮತ್ತು ಧ್ಯೇಯಾತ್ಮಕ ಸಮಾಜ ನಿರ್ಮಾಣಕ್ಕೆ ರಾಷ್ಟ್ರದ ಜನತೆ ಬದ್ದಕಂಕಣರಾಗಬೇಕೆಂದು ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಕರೆ ನೀಡಿದ್ದಾರೆ.
ರಾಷ್ಟ್ರಪತಿಗಳು ಮಂಗಳವಾರ ರಾತ್ರಿ ಮಾಡಿದ ಸ್ವಾತಂತ್ರ್ಯೋತ್ಸವ ಪ್ರಸಾರ ಸಂದೇಶದಲ್ಲಿ, ಇತ್ತೀಚಿನ ಚುನಾವಣೆಗಳಲ್ಲಿ ಕಂಡು ಬಂದ ಜಾತೀಯ ಹಾಗೂ ಗುಂಪು ಮನೋಭಾವನೆಗಳನ್ನು ಖಂಡಿಸಿದರು.
ರಾಷ್ಟ್ರದ ಜನತೆಯ ಮೇಲೆ ಜಾತೀಯ ಮತ್ತು ಗುಂಪು ಮನೋಭಾವದ ಪ್ರಭಾವ ಕಡಿಮೆಯಾಗಿಲ್ಲವೆಂದು ನುಡಿದ ರಾಷ್ಟ್ರಪತಿ ಈ ಭಾವನೆಗಳು ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯ ಮೆಲ್ಮೆಗೆ ಕಂಟಕವಾಗಿದೆಯೆಂದೂ, ತಮ್ಮಳಗೇ ಜಾತೀಯ ಪಂಚಾಯ್ತಿ ಭಾವನೆ ಏರ್ಪಡದಂತೆ ಪಂಚಾಯ್ತಿ ರಾಜ್ಯಗಳು ಜಾಗರೂಕವಾಗಿರಬೇಕೆಂದೂ ಅವರು ಹೇಳಿದರು.
`ಮುಖ್ಯಮಂತ್ರಿಗಳು ಕಲೆತರೆ ನದಿ ನೀರಿನ ಪ್ರಶ್ನೆ ಇತ್ಯರ್ಥ ಸಾಧ್ಯ~
ಹೈದರಾಬಾದ್, ಆ. 14 - ನಾವು ಮೂವರೂ - ಅಂದರೆ, ಮಹಾರಾಷ್ಟ್ರ, ಆಂಧ್ರ ಮತ್ತು ಮೈಸೂರಿನ ಮುಖ್ಯಮಂತ್ರಿಗಳು ಸೇರಿದರೆ, ಗುಲ್ಹಾಟ ಸಮಿತಿ ಇರಲಿ ಅಥವಾ ಇಲ್ಲದಿರಲಿ, ಕೃಷ್ಣಾ ಮತ್ತು ಗೋದಾವರಿ ನೀರಿನ ಹಂಚಿಕೆ ಸಮಸ್ಯೆಯನ್ನು ನಾವು ಬಗೆಹರಿಸಬಹುದೆಂದು ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು, ಇಂದು ಬೆಳಿಗ್ಗೆ ಆಂಧ್ರದ ಮುಖ್ಯಮಂತ್ರಿ ಶ್ರೀ ಸಂಜೀವರೆಡ್ಡಿಯವರ ಮನೆಯಲ್ಲಿ ಪತ್ರಿಕಾ ಪ್ರತಿನಿಧಿಗಳೊಡನೆ ಮಾತನಾಡುತ್ತಾ ತಿಳಿಸಿದರು.