ಆಹಾರದಲ್ಲಿ ಸ್ವಪರಿಪೂರ್ಣತೆ ಇರದಿದ್ದರೆ ಭವಿಷ್ಯ ಅನಿಶ್ಚಿತ
ಬೆಂಗಳೂರು, ಡಿ. 19– ಆಹಾರ ವಿಷಯದಲ್ಲಿ ಭಾರತವು ಸ್ವಸಂಪೂರ್ಣತೆಯನ್ನು ಸಾಧಿಸದಿದ್ದರೆ ಸ್ವಾತಂತ್ರ್ಯವು ಕೇವಲ ಮರೀಚಿಕೆಯಾಗುವುದೆಂದೂ ನಾಡಿನ ಭವಿಷ್ಯ ಅನಿಶ್ಚಯವಾಗುವುದೆಂದೂ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶ್ರೀ ಸಿ. ಸುಬ್ರಮಣ್ಯಂರವರು ಇಂದು ಇಲ್ಲಿ ಎಚ್ಚರಿಸಿದರು.
ಭಾರತಕ್ಕೆ ಹಾಕಿ ಸ್ವರ್ಣಪದಕ
ಬ್ಯಾಂಗ್ಕಾಕ್, ಡಿ. 19– ಎಕ್್ಸಟ್ರಾ ಟೈಮಿನ ಐದನೇ ನಿಮಿಷ ರೈಟ್ಔಟ್ ರೈಲ್ವೆಯ ಬಲಬೀರಸಿಂಗ್ ಗಳಿಸಿಕೊಟ್ಟ ಗೋಲಿನ ಮೂಲಕ ಪಾಕಿಸ್ತಾನದ ಮೇಲೆ 1–0 ಗೋಲು ಜಯ ಪಡೆದ ಒಲಿಂಪಿಕ್ ಚಾಂಪಿಯನ್್ಸ ಆದ ಭಾರತ ಟೀಮು ಐದನೇ ಏಷ್ಯನ್ ಕ್ರೀಡಾಕೂಟದ ಹಾಕಿ ಸ್ವರ್ಣಪದಕ ಗೆದ್ದುಕೊಂಡಿತು. ಏಷ್ಯನ್ ಹಾಕಿ ಪ್ರಶಸ್ತಿಯನ್ನು ಭಾರತ ಗೆಲ್ಲುತ್ತಿರುವುದು ಇದೇ ಮೊದಲ ಬಾರಿಗೆ.
ಆಕಾಶವಾಣಿಯಲ್ಲಿ ಜಾಹಿರಾತುಗಳ ಪ್ರಸಾರಕ್ಕೆ ಒಪ್ಪಿಗೆ
ನವದೆಹಲಿ, ಡಿ. 19– ಆಕಾಶವಾಣಿಯಲ್ಲಿ ಪ್ರಾಣಿ ಜಾಹಿರಾತುಗಳ ಪ್ರಸಾರಗಳನ್ನು ಜಾರಿಗೆ ತರಬೇಕೆಂಬ ಚಂದಾ ಸಮಿತಿಯ ಶಿಫಾರಸ್ಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶಾಖೆ ಮಾನ್ಯ ಮಾಡಿದೆ ಹಾಗೂ ಈ ಸಲಹೆಗಳನ್ನು ಮಂಜೂರಾತಿಗಾಗಿ ಸಚಿವ ಸಂಪುಟಕ್ಕೆ ಕಳುಹಿಸಿಕೊಡಲಾಗಿದೆ ಎಂದೂ ತಿಳಿದುಬಂದಿದೆ. ಶಿಫಾರಸ್ಗಳನ್ನು ಸಂಪುಟ ಒಪ್ಪಿಕೊಂಡಲ್ಲಿ ಜಾಹಿರಾತುಗಳನ್ನು ಮೊದಲು ಮಿತ ಪ್ರಮಾಣದಲ್ಲಿ ವಿವಿಧ ಭಾರತಿ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುತ್ತದೆ.
‘ಮುಂದಿನ ವರ್ಷವೂ ಹೆಚ್ಚು ಆಹಾರ ಆಮದು’
ಬೆಂಗಳೂರು, ಡಿ. 19– ನಾನಾ ಕಡೆಗಳಲ್ಲಿ ಕ್ಷಾಮ ತಲೆದೋರಿರುವುದರಿಂದ ಭಾರತ ಮುಂದಿನ ವರ್ಷವೂ ಅಧಿಕ ಪ್ರಮಾಣದಲ್ಲಿ ಆಹಾರ ಧಾನ್ಯ ಆಮದು ಮಾಡಿಕೊಳ್ಳಬೇಕಾದೀತೆಂದು ಕೇಂದ್ರ ಆಹಾರ ಸಚಿವ ಶ್ರೀ ಸಿ. ಸುಬ್ರಮಣ್ಯಂ ಅವರು ಇಂದು ಇಲ್ಲಿ ತಿಳಿಸಿದರು.
ಷರತ್ತಿಲ್ಲದ ಸರ್ಕಾರದ ಜತೆ ಚರ್ಚೆಗೆ ಸಿದ್ಧ ಎಂದು ಪುರಿ ಜಗದ್ಗುರು
ಪುರಿ, ಡಿ. 19– ಗೋಹತ್ಯೆ ವಿರೋಧ ಪ್ರಶ್ನೆ ಕುರಿತು ಯಾವುದೇ ಷರತ್ತಿಲ್ಲದೆ ಸರ್ಕಾರದೊಡನೆ ಚರ್ಚೆಗೆ ಸಿದ್ಧವಿರುವುದಾಗಿ ಪುರಿಯ ಶ್ರೀ ಶಂಕರಾಚಾರ್ಯ ಸ್ವಾಮಿಗಳು ಇಂದು ಇಲ್ಲಿ ತಿಳಿಸಿದರು.
ಉಪವಾಸ ನಿಲ್ಲಿಸದೆ ಮಾತುಕತೆ ಸಾಧ್ಯವಿಲ್ಲ ಎಂದು ಸರ್ಕಾರ ಒತ್ತಾಯಪಡಿಸದಿದ್ದಲ್ಲಿ ನಿರಶನ ನಿಲ್ಲಿಸುವುದಷ್ಟೇ ಅಲ್ಲದೆ ಗೋಹತ್ಯೆ ವಿರುದ್ಧ ಚಳವಳಿಯನ್ನು 15 ದಿನಗಳವರೆಗೆ ವಾಪಸ್ ತೆಗೆದುಕೊಳ್ಳಲು ತಯಾರಾಗಿರುವುದಾಗಿಯೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.