ಜಮೀನು ಜಗಳದ ಫಲ: ಮುದ್ದೆಬಿಹಾಳ್ ಬಳಿ 16 ಜನರ ಸಜೀವ ದಹನ
ಬೆಂಗಳೂರು, ಮಾ. 16– ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ್ ತಾಲ್ಲೂಕಿನ ರುಡಗಿ ಗ್ರಾಮದಲ್ಲಿ ಇಂದು ಮನೆಯೊಂದಕ್ಕೆ ಬೆಂಕಿ ಹಾಕಿ 16 ಜನರನ್ನು ಸುಟ್ಟ ಭಾರಿ ಭೀಕರ ಪ್ರಕರಣ ನಡೆದ ಸುದ್ದಿ ನಗರಕ್ಕೆ ತಲುಪಿದೆ.
ಅನಧಿಕೃತ ವರದಿಗಳ ಪ್ರಕಾರ ಈ ದುರಂತದಲ್ಲಿ ಮಡಿದವರ ಸಂಖ್ಯೆ ಇಪ್ಪತ್ತೈದೆಂದು ಹೇಳಲಾಗಿದೆ.
16 ಜನರ ದೇಹವನ್ನೂ ಹೊರತೆಗೆಯಲಾಗಿದೆಯೆಂದು ಬಿಜಾಪುರಕ್ಕೆ ಬಂದ ವರದಿ ತಿಳಿಸುತ್ತದೆ.
ಅಮೆರಿಕ ಅಧ್ಯಕ್ಷತೆಗೆ ಕೆನಡಿ ಸ್ಪರ್ಧೆ
ವಾಷಿಂಗ್ಟನ್, ಮಾ. 16– ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದಾಗಿ ಸೆನೆಟರ್ ರಾಬರ್ಟ್ ಕೆನಡಿ ಅವರು ಇಂದು ಅಧಿಕೃತವಾಗಿ ಪ್ರಕಟಿಸಿದರು.
‘ಯಾರನ್ನೇ ಆಗಲಿ ವಿರೋಧಿಸಬೇಕು’ ಎಂಬುದು ತಮ್ಮ ಉದ್ದೇಶವಲ್ಲ ಎಂದೂ ಹೊಸ ನೀತಿಗಳನ್ನು ಸೂಚಿಸುವುದೇ ತಮ್ಮ ಸ್ಪರ್ಧೆಯ ಉದ್ದೇಶವೆಂದೂ ಅವರು ತಿಳಿಸಿದರು.
ರಾಜ್ಯ ಯೋಜನಾ ಮಂಡಲಿಯ ಸ್ವರೂಪ
ಬೆಂಗಳೂರು, ಮಾ. 16– ರಾಜ್ಯ ಸರಕಾರ ರಚಿಸಲಿರುವ ರಾಜ್ಯ ಯೋಜನಾ ಮಂಡಲಿಯ ಸ್ವರೂಪವನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಇಂದು ಮೇಲ್ಮನೆಯಲ್ಲಿ ನೀಡಿ ‘ಅದು ಸಣ್ಣದಾಗಿರುತ್ತೆ’ ಎಂದರು.
ಮುಖ್ಯಮಂತ್ರಿಯವರು ಅಧ್ಯಕ್ಷರಾಗಿ, ಯೋಜನಾ ಮಂತ್ರಿಯವರು ಉಪಾಧ್ಯಕ್ಷರಾಗುವ ಮಂಡಲಿಗೆ ಅಭಿವೃದ್ಧಿ ಕಮಿಷನರ್ರವರು ಕಾರ್ಯದರ್ಶಿಯಾಗುವರು.
ಅಧಿಕಾರಿ ಸದಸ್ಯರುಗಳಲ್ಲದೆ ವ್ಯವಸಾಯ, ಕೈಗಾರಿಕೆ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವ ಸಾಮರ್ಥ್ಯ ಹೊಂದಿದ ತಲಾ ಒಬ್ಬ ತಜ್ಞರು ಸದಸ್ಯರಾಗಿರುವರು.
ಅವರವರ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯ ಪರಿಶೀಲನೆಗೆ ಬಂದಾಗ ಆಯಾ ಸಚಿವರು ಭಾಗವಹಿಸುವರು.