ಆರ್ಥಿಕ ಬಿಕ್ಕಟ್ಟಿನಿಂದಾಗಿ ಎಚ್.ಎಂ.ಟಿ. ಉತ್ಪನ್ನಗಳ ಮಾರಾಟ ವ್ಯವಹಾರ ಸ್ಥಗಿತ
ಬೆಂಗಳೂರು, ಜ. 27– ಎಚ್.ಎಂ.ಟಿ.ಯು ತಯಾರಿಸಿದ ಸುಮಾರು 350 ಲಕ್ಷ ರೂಪಾಯಿಗಳ ಬೆಲೆಬಾಳುವ ಮಷೀನ್ ಟೂಲುಗಳು ಮಾರಾಟವಾಗದೆ ಉಳಿದಿವೆ.
‘ರಾಷ್ಟ್ರದಲ್ಲಿ ಪ್ರಸ್ತುತ ಇರುವ ಆರ್ಥಿಕ ಬಿಕ್ಕಟ್ಟು ಇದಕ್ಕೆ ಕಾರಣ’ ಎಂದು ಎಚ್.ಎಂ.ಟಿ.ಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಸ್.ಎಂ. ಪಾಟೀಲ್ ಅವರು ನಿನ್ನೆ ಇಲ್ಲಿ ತಿಳಿಸಿದರು.
**
ದೆಹಲಿಯಲ್ಲಿ ವೈಭವದ ಪೆರೇಡ್: ರಾಷ್ಟ್ರಾದ್ಯಂತ ಗಣರಾಜ್ಯ ದಿನಾಚರಣೆ
ನವದೆಹಲಿ, ಜ. 27– ಭಾರತವು 18ನೆಯ ಗಣರಾಜ್ಯದಿನವನ್ನು ನಿನ್ನೆ ಸಂಭ್ರಮದಿಂದ ಆಚರಿಸಿತು. ಎಲ್ಲೆಡೆ ಧ್ವಜಾರೋಹಣ, ಮಾರ್ಚ್ ಪಾಸ್್ಟ ಪೆರೇಡ್, ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು.
ದೆಹಲಿಯಲ್ಲಿ ನಡೆದ ಪೆರೇಡಿನಲ್ಲಿ, ಈಚಿನ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಿರುವ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ರ ಬದಲು ಉಪರಾಷ್ಟ್ರಪತಿ ಡಾ. ಜಾಕಿರ್ ಹುಸೇನರು ಸೆಲ್ಯೂಟ್ ಸ್ವೀಕರಿಸಿದರು.
ರಾಜಪಥ್ನಲ್ಲಿ ನಡೆದ ಈ ಪೆರೇಡನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಸೂಪರ್ ಸಾನಿಕ್ ಮಿಗ್–21 ಹಾಗೂ ಬೆಂಗಳೂರಿನಲ್ಲಿ ತಯಾರಾದ ನ್ಯಾಟ್ಗಳು ಮೊದಲಾದ ಸುಮಾರು 70 ವಿಮಾನಗಳು ನಡೆಸಿದ ಹಾರಾಟದ ಪ್ರದರ್ಶನವು ಈ ಪೆರೇಡಿನ ಅತ್ಯಂತ ಆಕರ್ಷಕ ಅಂಶವಾಗಿತ್ತು.
ಭಾರತದ ಆತ್ಮಾವಲಂಬನೆಯ ಕುರುಹಾದ ವೈಜಯಂತ ಟ್ಯಾಂಕ್ಗಳೂ, ಭಾರತದಲ್ಲಿಯೇ ತಯಾರಾದ ಪರ್ವತದ ಪ್ರದೇಶಗಳಲ್ಲಿ ಬಳಸುವ ಫಿರಂಗಿಗಳೂ ಜನರ ಗಮನ ಸೆಳೆದುವು.
**
ಪುರಿಸ್ವಾಮಿಗಳ ಎದೆಯಲ್ಲಿ ನೋವು
ಪುರಿ, ಜ. 27– ಗೋಹತ್ಯೆ ವಿರುದ್ಧ ಶ್ರೀ ಪುರಿಸ್ವಾಮಿಗಳು ಹೂಡಿರುವ ಉಪವಾಸ ಮುಷ್ಕರ ಇಂದು 69ನೇ ದಿನಕ್ಕೆ ಮುಟ್ಟಿತು. ಅವರಿಗೆ ಇಂದು ನಿತ್ರಾಣದ ಜತೆಗೆ ಎದೆ ಭಾಗದಲ್ಲೆಲ್ಲಾ ನೋವು ಕಾಣಿಸಿಕೊಂಡಿರುವುದಾಗಿ ವೈದ್ಯಕೀಯ ಪ್ರಕಟಣೆ ತಿಳಿಸಿದೆ.