ಮಧುಗಿರಿ ಪ್ರಕರಣದ ನ್ಯಾಯಾಂಗ ತನಿಖೆ
ಬೆಂಗಳೂರು, ಡಿ. 14– ಮಧುಗಿರಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನಡೆದಿರುವ ಪೊಲೀಸ್ ಅತ್ಯಾಚಾರದ ಬಗ್ಗೆ ನ್ಯಾಯಾಂಗಾಧಿಕಾರಿಯಿಂದ ವಿಚಾರಣೆ ಏರ್ಪಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
‘ನ್ಯಾಯಾಂಗಾಧಿಕಾರಿಯಿಂದ ವಿಚಾರಣೆ ನಡೆಸಲು, ಯಾವ ನ್ಯಾಯ ಮೂರ್ತಿಯ ಸೇವೆಯನ್ನು ಒದಗಿಸಲು ಸಾಧ್ಯ ಎಂದು ಪ್ರಾರ್ಥಿಸಲು ಶ್ರೇಷ್ಠ ನ್ಯಾಯಾಧೀಶರೊಡನೆ ಸಂಪರ್ಕ ಬೆಳೆಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ರಾಜೀನಾಮೆ ಕೊಡದಿದ್ದರೆ ಪ್ರಧಾನಿ ತನಕ ದೂರು
ಬೆಂಗಳೂರು, ಡಿ. 14– ಮಧುಗಿರಿ ತಾಲ್ಲೂಕಿನ ಪ್ರಕರಣದ ಬಗ್ಗೆ ಇಂದು ವಿಧಾನ ಪರಿಷತ್ತಿನಲ್ಲಿ ಚರ್ಚೆಯನ್ನಾರಂಭಿಸಿದ ಪಿ.ಎಸ್.ಪಿ.ಯ ಶ್ರೀ ಎ.ಎಚ್. ಶಿವಾನಂದಸ್ವಾಮಿಯವರು ತಮ್ಮ ದೀರ್ಘ ಭಾಷಣದಲ್ಲಿ ಗೃಹಸಚಿವ ಶ್ರೀ ಎಂ.ವಿ. ರಾಮರಾವ್ರವರು ರಾಜೀನಾಮೆ ಕೊಡಬೇಕೆಂದು ಪದೇ ಪದೇ ಒತ್ತಾಯಪಡಿಸಿ ಅವರು ರಾಜೀನಾಮೆ ಕೊಡದಿದ್ದರೆ ಪ್ರಧಾನಿಯತನಕ ದೂರೊಯ್ಯುವುದಾಗಿ ತಿಳಿಸಿದರು.
ಭಾಷಾ ಮಸೂದೆ ತಿದ್ದುಪಡಿಗೆ ದಕ್ಷಿಣ ರಾಜ್ಯಗಳ ಕಾಂಗ್ರೆಸ್ ಎಂ.ಪಿ.ಗಳ ವಿರೋಧ
(ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಡಿ. 14– ಹಿಂದಿ ಭಾಷೆ ಮಾತನಾಡುವ ರಾಜ್ಯಗಳ ಕಾಂಗ್ರೆಸ್ ಎಂ.ಪಿ.ಗಳ ಟೀಕೆಯನ್ನು ನಿಲ್ಲಿಸುವುದಕ್ಕಾಗಿ ಅಧಿಕೃತ ಭಾಷಾ ಮಸೂದೆಗೆ ತಿದ್ದುಪಡಿಗಳನ್ನು ಸರಕಾರ ಅಂಗೀಕರಿಸಿರುವ ಬಗ್ಗೆ ದಕ್ಷಿಣ ರಾಜ್ಯಗಳ ಸದಸ್ಯರು ಇಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಮುಂದಿನ ವರ್ಷಕ್ಕೆ ಇನ್ನೂ ಸಣ್ಣ ಯೋಜನೆ: 2000 ಕೋಟಿ ರೂ.?
ನವದೆಹಲಿ, ಡಿ. 14– ಮುಂದಿನ ವರ್ಷದ ‘ವಾರ್ಷಿಕ ಯೋಜನೆ’ ಕುರಿತ ಸಂಪನ್ಮೂಲಗಳ ಬಗ್ಗೆ ಯೋಜನಾ ಆಯೋಗದ ಉಪಾಧ್ಯಕ್ಷ ಡಾ. ಡಿ.ಆರ್. ಗಾಡ್ಗೀಳ್ ಮತ್ತು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿಯವರು ಇಂದು ಇಲ್ಲಿ ವಿಚಾರ ವಿನಿಮಯ ನಡೆಸಿದರು.
ಸರ್ಕಾರಿ ಕ್ಷೇತ್ರದ ಬಗ್ಗೆ ರಾಜ್ಯ ಸಭೆಯಲ್ಲಿ ಟೀಕೆ
ನವದೆಹಲಿ, ಡಿ. 14– ನಾಲ್ಕನೆ ಯೋಜನೆ ಮುಂದೂಡಿಕೆ ಬಗ್ಗೆ ಪ್ರಧಾನಿ ನೀಡಿದ ಹೇಳಿಕೆ ಮೇಲೆ ನಡೆದ ಚರ್ಚೆಯ ಕಾಲದಲ್ಲಿ ಇಂದು ರಾಜ್ಯಸಭೆಯಲ್ಲಿ ಸರ್ಕಾರಿ ಕ್ಷೇತ್ರದ ಉದ್ಯಮಗಳು ಉಗ್ರ ಟೀಕೆಗೆ ಗುರಿಯಾದವು.
ಯೋಜನೆಗೆ ತಳಹದಿಯಾದ ಕೃಷಿಗೆ ಮಹತ್ವ ನೀಡಬೇಕೆಂದು ಮಾತನಾಡಿದ್ದ ಎಲ್ಲಾ ಸದಸ್ಯರು ಒತ್ತಾಯ ಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.