ಕಾನೂನು ರೂಪಿಸುವವರಿಗೊಂದು ನೀತಿ, ಆ ಕಾನೂನಿಗೆ ಒಳಪಡುವವರಿಗೆ ಒಂದು ನೀತಿ ಎನ್ನುವಂತೆ, ಮಾಜಿ ಹಾಗೂ ಹಾಲಿ ಶಾಸಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಿ, ಸರ್ಕಾರಿ ನೌಕರರ ಮೇಲೆ ಮಾತ್ರ ‘ಹೊಸ ಪಿಂಚಣಿ ಯೋಜನೆ’ ಎಂಬ ಮಾರಕಾಸ್ತ್ರವನ್ನು ಸರ್ಕಾರ ಪ್ರಯೋಗಿಸುತ್ತಿರುವುದು ಸರಿಯಲ್ಲ.
ಕೇವಲ ಐದು ವರ್ಷ ಜನಪ್ರತಿನಿಧಿಯಾಗಿದ್ದವರಿಗೆ ಯೋಗ್ಯ ಪಿಂಚಣಿ ಒದಗಿಸಿ, ಜೀವಮಾನವಿಡೀ ಸರ್ಕಾರಿ ಸೇವೆ ಮಾಡುವ ನೌಕರರನ್ನು ನಿರ್ಲಕ್ಷಿಸುವುದು ತಪ್ಪು.
ಯಾವುದೇ ರೀತಿಯ ಭದ್ರತೆ ಇಲ್ಲದ ಈ ಯೋಜನೆಯಿಂದಾಗಿ, 2006ರ ಏಪ್ರಿಲ್ ತಿಂಗಳ ನಂತರ ನೇಮಕಗೊಂಡ ನೌಕರರು ಬೀದಿಗೆ ಬಿದ್ದಂತಾಗಿದೆ. ಸರ್ಕಾರ, ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಿ, ಅತಂತ್ರ ನೌಕರರ ಬದುಕಿಗೆ ಭದ್ರತೆ ಒದಗಿಸಬೇಕು.