ನವದೆಹಲಿ, ಫೆ. 4 (ಪಿಟಿಐ)– ಕೇಂದ್ರ ಬಜೆಟ್ ಕುರಿತ ತನ್ನ ಸಲಹೆಗಳನ್ನು ಜಾರಿ ಮಾಡಬೇಕೆಂದು ವಿಶ್ವಬ್ಯಾಂಕ್ ಭಾರತದ ಮೇಲೆ ಒತ್ತಡ ಹೇರಿದೆ ಎಂಬ ಆರೋಪವನ್ನು ಬ್ಯಾಂಕಿನ ಪ್ರತಿನಿಧಿ ಒಕ್ಟೆಯ್ ಯೇನಲ್ ನಿರಾಕರಿಸಿದ್ದಾರೆ.
ಆದರೆ ಬ್ಯಾಂಕಿನ ಸಲಹೆಗಳನ್ನು ಸರ್ಕಾರ ಪರಿಶೀಲಿಸಿದ್ದು, ನಿಗದಿತ ಅವಧಿಯಲ್ಲಿ ಈ ಸಲಹೆಗಳನ್ನು ಜಾರಿ ಮಾಡಲಿದೆ ಎಂದು ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಆಕಾಶ್’ ಕ್ಷಿಪಣಿ ಉಡಾವಣೆ ಯಶಸ್ವಿ
ನವದೆಹಲಿ, ಫೆ. 4 (ಪಿಟಿಐ, ಯುಎನ್ಐ)– ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಇಂದು ಒರಿಸ್ಸಾ ಕರಾವಳಿಯ ಚಂಡೀಪುರ ಬಳಿ ಸಮುದ್ರದಲ್ಲಿ ‘ಆಕಾಶ್’ ಕ್ಷಿಪಣಿಯ ಪರೀಕ್ಷಾ ಉಡಾವಣೆಯಲ್ಲಿ ಯಶ ಗಳಿಸಿದರು.
ಪು.ತಿ.ನ.ಗೆ ಫೆಲೋಷಿಪ್
ನವದೆಹಲಿ, ಫೆ. 4 (ಯುಎನ್ಐ)– ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ಗೆ ಈ ಬಾರಿ ಆಯ್ಕೆಯಾದ ಒಂಬತ್ತು ಲೇಖಕರ ಪೈಕಿ ಆರ್.ಕೆ. ನಾರಾಯಣ್ (ಇಂಗ್ಲಿಷ್) ಮತ್ತು ಡಾ. ಪು.ತಿ. ನರಸಿಂಹಾಚಾರ್ (ಕನ್ನಡ) ಸೇರಿದ್ದಾರೆ.
ಭಾರತೀಯ ಸಾಹಿತ್ಯದ ಮೇರುವ್ಯಕ್ತಿಗಳಿಗೆ ಮಾತ್ರ ಮೀಸಲಾಗಿರುವ ಈ ಫೆಲೋಷಿಪ್ ಒಂದು ಬಾರಿಗೆ 21 ಜನರಿಗೆ ಮಾತ್ರ ನೀಡಲಾಗುವುದು ಎಂದು ಫೆಲೋಷಿಪ್ ಪಡೆದವರ ಹೆಸರನ್ನು ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಯು.ಆರ್. ಅನಂತಮೂರ್ತಿ ತಿಳಿಸಿದರು.