ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಸುವ ಕುರಿತಂತೆ ರಾಜಕೀಯ ನಾಯಕರ ಪರ, ವಿರೋಧದ ಹೇಳಿಕೆಗಳು ಹೊರಬೀಳುತ್ತಿವೆ. ಭಗವದ್ಗೀತೆಯ ಸೇರ್ಪಡೆ ಹಿಂದುತ್ವದ ಕಾರ್ಯಸೂಚಿ ಎಂಬಂತೆ ಬಿಂಬಿಸಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ‘ಸರ್ಕಾರದ ಚಿಂತನೆ ಕೊರೊನಾಗಿಂತ ಅಪಾಯಕಾರಿ’ ಎಂದು ಅಪದ್ಧ ಹೇಳಿಕೆ ನೀಡಿದ್ದಾರೆ. ಅದೇ ಪಕ್ಷದ ಸಿದ್ದರಾಮಯ್ಯ ಹಾಗೂ ಯು.ಟಿ.ಖಾದರ್ ಸಮತೂಕದ ಮಾತುಗಳನ್ನಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ‘ಭಗವದ್ಗೀತೆಯಿಂದ ಹೊಟ್ಟೆ ತುಂಬುತ್ತದೆಯೇ?’ ಎಂದು ಪ್ರಶ್ನಿಸುವ ಮೂಲಕ, ಶಿಕ್ಷಣದ ಗುರಿ ಕೇವಲ ‘ಹೊಟ್ಟೆ ಹೊರೆದುಕೊಳ್ಳುವುದು’ ಎಂದು ಭಾವಿಸಿದಂತಿದೆ! ಭಗವದ್ಗೀತೆ ಮಾತ್ರ ನೈತಿಕ ಗ್ರಂಥವೆಂದೂ ಕುರಾನ್, ಬೈಬಲ್ಗಳು ಧಾರ್ಮಿಕ ಗ್ರಂಥಗಳೆಂದೂ ಆ ಕಾರಣಕ್ಕಾಗಿ ಅವುಗಳನ್ನು ಪಠ್ಯದಲ್ಲಿ ಸೇರಿಸಬಾರದೆಂದು ಸಂಸದ ಪ್ರತಾಪ ಸಿಂಹ ಸಂಕುಚಿತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.