ಬಸವಣ್ಣನೆಂಬ ಶ್ರೇಷ್ಠ ಚಿಂತಕನಿಂದ ಹೊರಹೊಮ್ಮಿದ ಚಿಂತನೆಯು ಸನಾತನ ಕ್ರೂರ ವ್ಯವಸ್ಥೆಯ ವಿರುದ್ಧ ಹೊರಹೊಮ್ಮಿದ್ದೇ ಹೊರತು, ಅದು ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯಲ್ಲ. ಹನ್ನೆರಡನೆಯ ಶತಮಾನದ ಪ್ರಗತಿಪರ ಕ್ರಾಂತಿಯ ಎಲ್ಲ ಹಂತಗಳಲ್ಲಿ ಕಂಡುಬಂದದ್ದು, ಜಿಡ್ಡುಗಟ್ಟಿದ ಸನಾತನ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಚಿಂತನೆಗಳಾಗಿವೆ ಎಂಬ ಕನಿಷ್ಠ ಜ್ಞಾನ ನಮಗೆ ಇಲ್ಲದೇಹೋದದ್ದು ದುರದೃಷ್ಟಕರ. ಸನಾತನ ವ್ಯವಸ್ಥೆಯ ಲೋಪ ದೋಷಗಳ ಕುರಿತು ಚರ್ಚಿಸಲೆಂದೇ ರೂಪುಗೊಂಡಿದ್ದ ಆ ಅನುಭವ ಮಂಟಪವನ್ನು ಇಂದು ಸನಾತನ ವ್ಯವಸ್ಥೆಯೊಂದಿಗೆ ಜೋಡಿಸಿ, ಬಸವಣ್ಣನವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಬಾರದು. ಅನುಭವ ಮಂಟಪವನ್ನು ಪುನರುಜ್ಜೀವನಗೊಳಿಸದಿದ್ದರೂ ಪರವಾಗಿಲ್ಲ, ಬಸವಣ್ಣನವರ ಚಿಂತನೆಗಳನ್ನು ವಿರೂಪಗೊಳಿಸದಿದ್ದರೆ ಒಳ್ಳೆಯದು.