‘ಅನುಭವ ಮಂಟಪ’ ನಿರ್ಮಾಣಕ್ಕೆ ಭೂಮಿಪೂಜೆ ಸಂದರ್ಭದಲ್ಲಿ ಪ್ರಕಟವಾದ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂಬ ಶೀರ್ಷಿಕೆಯ ಬಗ್ಗೆ ಕೆಲವು ಗೊಂದಲದ ವ್ಯಾಖ್ಯಾನಗಳು ಕೇಳಿಬಂದಿವೆ. ಮೊದಲನೆಯದಾಗಿ, ಸನಾತನ ಎಂಬ ಪದ ಸಂಸ್ಕೃತ ಮೂಲದ್ದು. ಸನಾತನ ಎಂದರೆ ಸದಾಕಾಲ ಇರುವಂತಹುದು, ಸರ್ವಕಾಲಕ್ಕೂ ಒಪ್ಪುವಂತಹುದು. ಅವ್ಯಯವಾಗದೆ, ಮಿತಿ ಇಲ್ಲದೆ, ದೀರ್ಘಕಾಲದವರೆಗೆ ಶಾಶ್ವತವಾಗಿ ಉಳಿಯುವ ಸೂರ್ಯ, ಚಂದ್ರ, ನಕ್ಷತ್ರ, ಪ್ರಕೃತಿ, ಪಂಚಭೂತಗಳು, ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳು ಸನಾತನ. ಇಂತಹ ಸನಾತನ ವಿಶ್ವವ್ಯವಸ್ಥೆ ಮತ್ತು ಜೈವಿಕ ವ್ಯವಸ್ಥೆಯನ್ನು ಗೌರವಿಸಿ ಪೂಜಿಸುವುದು ಸನಾತನ ಸಂಸ್ಕೃತಿ.