ಅದರಲ್ಲೂ ಈಗಿನ ಪ್ರಕರಣದ ಪ್ರತ್ಯಕ್ಷದರ್ಶಿಗಳ ಮಾತಂತೂ, ಇಡೀ ಕಾಮಗಾರಿಯ ಅಡ್ಡಕಸಬಿತನವನ್ನು ಎತ್ತಿ ತೋರಿಸುವಂತಿದೆ. ಈಗಾಗಲೇ ಚಾಲನೆಯಲ್ಲಿರುವ ಮೆಟ್ರೊ ಮಾರ್ಗಗಳಲ್ಲಿ ಕಿಕ್ಕಿರಿದಿರುವ ಜೋಡಿ-ಜೋಡಿ ರೈಲುಗಳು ಏಕಕಾಲದಲ್ಲಿ ನಿಬಿಡ ರಸ್ತೆಗಳ ಮೇಲೇ ಸಮಾನಾಂತರವಾಗಿ ಹೋಗುತ್ತಿರುತ್ತವೆ. ರೈಲು, ರಸ್ತೆ, ಸೇತುವೆ ಎಂಜಿನಿಯರುಗಳಿಗೆ ಇರಬೇಕಾದಂತೆ, ನಗರ ಯೋಜಕರಿಗೂ ದೂರದೃಷ್ಟಿ ಮತ್ತು ಜನವಸತಿ ಪ್ರದೇಶದ ತಾಳಿಕೆ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇರುವುದು ಬೇಡವೇ? ಬೆಂಗಳೂರಿಗೆ ಸಂಬಂಧಪಟ್ಟಂತೆ ಅಂಥದೊಂದು ಜವಾಬ್ದಾರಿಯುತ ವ್ಯವಸ್ಥೆ ಇರುವಂತೆಯೇ ಭಾಸವಾಗುವುದಿಲ್ಲ. ಇಡೀ ರಾಜ್ಯದ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ, ರಾಷ್ಟ್ರದ ಬಹುತೇಕ ಕಾರ್ಯಯೋಜನೆಗಳೂ ಬೆಂಗಳೂರು ನಗರದಲ್ಲೇ ಸಾಂದ್ರವಾಗಿರಬೇಕೆಂದು ಸರ್ಕಾರ ಭಾವಿಸಿರುವಂತಿದೆ.