ಸರಣಿಯುದ್ದಕ್ಕೂ ಉತ್ತಮ ಆಟವಾಡಿ, ವಿಶ್ವದಾಖಲೆಯ ಮೊತ್ತ ಪೇರಿಸಿದ ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸೆಮಿಫೈನಲ್ ಪಂದ್ಯದಲ್ಲಿ ತಲಾ ಒಂದು ರನ್ ಗಳಿಸಿ ಔಟಾದದ್ದು, ‘ಮನುಷ್ಯನೊಬ್ಬ ಜೀವನದ ಯಾವ ಕ್ಷಣದಲ್ಲಾದರೂ ಎಡವಬಹುದು’ ಎಂಬುದನ್ನು ತಿಳಿಸಿತು. ಶಿಖರ್ ಧವನ್ ಅವರು ಗಾಯಗೊಂಡಿದ್ದರಿಂದ ತೆರವಾದ ಸ್ಥಾನಕ್ಕೆ ರಿಷಭ್ ಪಂತ್ ಆಯ್ಕೆಯಾದರು. ಇದು, ‘ಅವಕಾಶ ಯಾವಾಗ ಬೇಕಾದರೂ ಬಂದು ಬಾಗಿಲು ಬಡಿಯಬಹುದು’ ಎಂಬುದನ್ನು ಪ್ರತಿಪಾದಿಸಿತು. ಭಾರತವು ಪಂದ್ಯವನ್ನು ಹೀನಾಯವಾಗಿ ಸೋಲುತ್ತದೆ ಎಂಬ ಭಾವನೆ ಮೂಡಿದ್ದ ಸಂದರ್ಭದಲ್ಲಿ ಮೈದಾನಕ್ಕೆ ಬಂದ ರವೀಂದ್ರ ಜಡೇಜ ಅವರು ‘ಜೀವನದಲ್ಲಿ ಎಲ್ಲವೂ ಮುಗಿಯಿತು’ ಎಂದು ಕುಳಿತಂತಹವರಿಗೆ ಸ್ಫೂರ್ತಿಯಾಗುವಂಥ ಆಟವಾಡಿದರು. ಗಪ್ಟಿಲ್ ಅವರು ಎಸೆದ ಚೆಂಡು ನೇರವಾಗಿ ಸ್ಟಂಪ್ಗೆ ಬಡಿದು, ತಾಳ್ಮೆಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಔಟಾದರು. ಅದೃಷ್ಟವು ಎಲ್ಲಾ ಸಮಯದಲ್ಲೂ ಜೊತೆಗಿರುವುದಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಯಿತು.