‘ಬದಲಾಗಬೇಕಿದೆ ಬಳಕೆದಾರರ ಧೋರಣೆ’ ಎಂಬ, ಗ್ರಾಹಕ ಹಕ್ಕುಗಳ ತಜ್ಞ ವೈ.ಜಿ.ಮುರಳೀಧರನ್ ಅವರ ಲೇಖನ (ಪ್ರ.ವಾ., ಡಿ. 23) ಆಲೋಚನೆಗೆ ಪ್ರಚೋದಿಸುವಂತಿದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಗ್ರಾಹಕ ತನಗರಿವಿಲ್ಲದಂತೆಯೇ ಬಹುಮುಖ ವಂಚನೆಗೆ ಒಳಗಾಗುತ್ತಿದ್ದಾನೆ. ಒಂದೆಡೆ ಗ್ರಾಹಕನನ್ನು ವಂಚಿಸುವ ವ್ಯವಸ್ಥೆಯಿದ್ದರೆ, ಮತ್ತೊಂದೆಡೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಗ್ರಾಹಕ ತಾನಾಗಿಯೇ ವಂಚನೆಯ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾನೆ. ಗ್ರಾಹಕನ ರಕ್ಷಣೆಗಾಗಿ ಕಾನೂನುಗಳು, ಗ್ರಾಹಕ ನ್ಯಾಯಾಲಯಗಳಿದ್ದರೂ
ಆ ಬಗ್ಗೆ ಅರಿತುಕೊಳ್ಳುವ ವ್ಯವಧಾನವೇ ಇಂದಿನ ಪೀಳಿಗೆಯಲ್ಲಿಲ್ಲ. ಅಷ್ಟೇ ಅಲ್ಲದೆ ಅನ್ಯಾಯದ ವಿರುದ್ಧ ದನಿಯೆತ್ತುವ, ಪ್ರಶ್ನಿಸುವ, ಪ್ರತಿಭಟಿಸುವ ಮನೋಭಾವವನ್ನೂ ಈಗಿನ ಪೀಳಿಗೆ ಕಳೆದುಕೊಂಡಿರುವುದರಿಂದ ನಿತ್ಯ ಜೀವನದ ವ್ಯವಹಾರಗಳಲ್ಲಿ ಗ್ರಾಹಕ ಒಂದಲ್ಲ ಒಂದು ರೀತಿಯ ಶೋಷಣೆಗೆ, ವಂಚನೆಗೆ ಒಳಗಾಗುತ್ತಲೇಇದ್ದಾನೆ.