ಹಿಂದೆ ನಮಗೆ ಮಧ್ಯವಾರ್ಷಿಕ ಪರೀಕ್ಷೆಗಳು ಗಾಂಧಿಜಯಂತಿಗಿಂತ ಮುಂಚೆಯೇ ಮುಗಿಯುತ್ತಿದ್ದವು. ಗಾಂಧಿ ಜಯಂತಿ ನಂತರ ದಸರಾ ರಜೆ ಶುರುವಾದರೆ, ನವೆಂಬರ್ ಎರಡರಂದೇ ನಾವು ಶಾಲೆಗೆ ಹೋಗುತ್ತಿದ್ದದ್ದು. ಅಷ್ಟು ದಿನಗಳಲ್ಲಿ ದಸರೆ ಹಬ್ಬವನ್ನು ಮೈಸೂರಿನ ನೆಂಟರ ಮನೆಗಳಲ್ಲಿ ಸಂಭ್ರಮಿಸುತ್ತಾ ಅಥವಾ ಹಳ್ಳಿಗಳಲ್ಲಿ ಅಜ್ಜ– ಅಜ್ಜಿಯ ಮನೆಯಲ್ಲಿ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ಕಳೆಯುತ್ತಿದ್ದೆವು. ಗುಡ್ಡ, ಕಾಡು ಮೇಡು ಅಲೆಯುವುದು, ಪ್ರಕೃತಿಯ ರಮಣೀಯ ಸೌಂದರ್ಯ ಆಸ್ವಾದಿಸುವ ಪರಿ ಚೆನ್ನಾಗಿತ್ತು. ಎತ್ತು, ಹಸು, ಕುರಿ ಮೇಯಿಸಲು ಹೋಗುವುದು, ಅಡವಿಗೆ ಹೋಗಿ ಹುಲ್ಲು ತರುವುದು ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸುತ್ತಿದ್ದವು.