ಪಿಂಚಣಿದಾರರ ಸ್ವರ್ಗ, ಉದ್ಯಾನಗಳ ನಗರ, ಹವಾನಿಯಂತ್ರಿತ ನಗರ, ಮಧ್ಯಮವರ್ಗದವರ ತಾಣ, ಸಿಲಿಕಾನ್ ವ್ಯಾಲಿ, ಪಬ್ ಸಿಟಿ, ಕಾಸ್ಮೊಪಾಲಿಟನ್ ನಗರ ಎಂದೆಲ್ಲಾ ಬೆಂಗಳೂರನ್ನು ಮಾರ್ಕೆಟಿಂಗ್ ಮಾಡಿ ಈಗಾಗಲೇ ಅದರ ಜನಸಂಖ್ಯೆ ಕೋಟಿಯನ್ನು ಮೀರಿದೆ. ನಗರದ ಧಾರಣಾಶಕ್ತಿ ಕಟ್ಟೊಡೆಯುತ್ತಿದ್ದು ದಿನದಿಂದ ದಿನಕ್ಕೆ ಇಲ್ಲಿನವರ ಬದುಕು ದುಸ್ತರವಾಗುತ್ತಿದೆ. ಇನ್ನು ಸುಲಲಿತ ಜೀವನ ನಿರ್ವಹಣೆಗೆ ಉತ್ತಮ ನಗರ ಎನ್ನುವ ಕಿರೀಟವು ಬದುಕನ್ನು ಇನ್ನಷ್ಟು ಹೈರಾಣಾಗಿಸಬಹುದು ಎಂಬುದು ಬೆಂಗಳೂರಿಗರ ಆತಂಕವಾಗಿದೆ. ಹಾಗಾಗದಿರಲಿ ಎಂದು ಅವರು ಹಾರೈಸುತ್ತಿದ್ದಾರೆ.