ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಕುಟುಂಬದ ಎಲ್ಲ ಸದಸ್ಯರೂ ತಮ್ಮ ಬೆರಳಚ್ಚನ್ನು ದೃಢಪಡಿಸಿ ಆಹಾರಧಾನ್ಯ ಪಡೆದುಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದ ಜನ, ಉದ್ಯೋಗ ಅರಸಿ ಹೈದರಾಬಾದ್ ಕಡೆ ಹೋಗಿರುತ್ತಾರೆ. ಅವರೆಲ್ಲ ಪಡಿತರ ಪಡೆಯುವ ಸಲುವಾಗಿ ಅಲ್ಲಿಂದ ತಮ್ಮ ಊರುಗಳಿಗೆ ಬಂದು ಹೋಗುತ್ತಾರೆ. ಹೀಗೆ ನೂರಾರು ಜನ ನ್ಯಾಯಬೆಲೆ ಅಂಗಡಿಗೆ ಬಂದು ಅದೇ ಬಯೊಮೆಟ್ರಿಕ್ ಯಂತ್ರದಲ್ಲಿ ತಮ್ಮ ಬೆರಳನ್ನು ಇಡಬೇಕಾಗುತ್ತದೆ. ಇವರಲ್ಲಿ ಕೊರೊನಾ ವೈರಸ್ ಸೋಂಕುಪೀಡಿತರೇನಾದರೂ ಇದ್ದರೆ ಎನ್ನುವ ಭಯ ಗ್ರಾಹಕರನ್ನು ಕಾಡುತ್ತಿದೆ. ಕೊರೊನಾ ವೈರಾಣುವಿನ ಪಿಡುಗು ದೂರವಾಗುವವರೆಗೂ ಬಯೊಮೆಟ್ರಿಕ್ನಲ್ಲಿ ಬೆರಳಚ್ಚು ದೃಢಪಡಿಸದೆ, ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಒಬ್ಬ ಸದಸ್ಯ ನ್ಯಾಯಬೆಲೆ ಅಂಗಡಿಗೆ ಬಂದು, ಕುಟುಂಬದ ಎಲ್ಲ ಸದಸ್ಯರ ಆಹಾರಧಾನ್ಯ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.