ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನೆಯ ಕೊರತೆ ಗೋಚರ

ಅಕ್ಷರ ಗಾತ್ರ

ರೈತರಿಗೆ ಸಲ್ಲಬೇಕಾದ ಬೆಳೆ ವಿಮೆ ಪಾವತಿಸಲು ವಿಳಂಬ ಮಾಡಿರುವುದಕ್ಕೆ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವುದು (ಪ್ರ.ವಾ., ಜ. 14) ಸರಿಯಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದರೂ ಜಿಲ್ಲಾ ಮಟ್ಟದ ಕುಂದುಕೊರತೆಗಳ ಪರಿಹಾರ ಸಮಿತಿ ರಚನೆಯಾಗಿರುವುದು 2019ರಲ್ಲಿ. ಅಂದರೆ ಮೂರು ವರ್ಷಗಳ ನಂತರ! ಅಷ್ಟು ಸಾಲದೆಂಬಂತೆ, 189 ರೈತರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿರುವ ಕಾರಣ ಬೆಳೆ ವಿಮೆ ಪರಿಹಾರ ನೀಡಿಕೆ ಸಾಧ್ಯವಾಗಿಲ್ಲವಂತೆ! ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರವೇ ತಿಳಿಸಿದೆ.

ವಿಮಾ ಪರಿಹಾರ ಬಿಡುಗಡೆಯಾಗದ 2016ರಿಂದ ಈವರೆಗಿನ ಅವಧಿಯಲ್ಲಿ, ರೈತರ ಅಭಿವೃದ್ಧಿಯೇ ದಿವ್ಯ ಮಂತ್ರವೆಂದು ಸದಾ ಪಠಿಸುವ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನೇತೃತ್ವದ ಸರ್ಕಾರಗಳು ಆಡಳಿತ ನಡೆಸಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸಂವೇದನೆಯಿಂದ ಕಾರ್ಯನಿರ್ವಹಿಸದಿರುವುದು ಸ್ಪಷ್ಟವಾಗುತ್ತದೆ. ತಾಂತ್ರಿಕವಾಗಿ ಶರವೇಗದಲ್ಲಿ ಮುಂದುವರಿಯುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ರೈತರ ನಿಷ್ಕ್ರಿಯ ಖಾತೆಗಳನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಕಾರ್ಯನಿರ್ವಹಿಸುವವರಿಗೆ ಬದ್ಧತೆ ಮತ್ತು ಕ್ರಿಯಾಶೀಲತೆ ಜೊತೆಗೆ ಸಾರ್ವಜನಿಕರ ಬಗೆಗೆ ಸೂಕ್ಷ್ಮ ಸಂವೇದನೆಯೂ ಇರಬೇಕು. ಇಲ್ಲವಾದಲ್ಲಿ, ಬಹು ಅಬ್ಬರದೊಡನೆ ಸರ್ಕಾರಗಳು ಘೋಷಿಸುವ ಕಲ್ಯಾಣ ಕಾರ್ಯಕ್ರಮಗಳ ಫಲ ಉದ್ದೇಶಿತರಿಗೆ ತಲುಪದೇ ವಿಫಲವಾಗುತ್ತವೆ.

– ತಿಪ್ಪೂರು ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT