ಸನ್ಮಾನ ಸಮಾರಂಭಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಂಗತಿಗಳ ಬಗೆಗೆ ನಮ್ಮ ಜನರು ಗೌರವ, ಸಂತಸದ ಭಾವನೆಗಳನ್ನು ಹೊಂದಿದ್ದಾರೆ. ಇದರ ಬದಲಾವಣೆಗೆ ಎಲ್ಲರ ಮನಸ್ಸುಗಳೂ ಒಪ್ಪದಿರುವ ಸಾಧ್ಯತೆ ಇದೆ. ಈ ಬಗೆಯ ನಿಷೇಧಕ್ಕೆ ಹಲವರು ತಾತ್ವಿಕ ವಿರೋಧ ಹೊಂದಿದ್ದು, ಈ ಬಗ್ಗೆ ಪರಿಣತರ ತಂಡದಿಂದ ಅನೇಕ ಆಯಾಮಗಳ ಚಿಂತನೆ ಅಗತ್ಯ. ಎಲ್ಲರ ಹಿತದೃಷ್ಟಿಯ ನೆಲೆಯಲ್ಲಿ ಸರ್ಕಾರವು ತನ್ನ ಕಾರ್ಯಕ್ರಮಗಳಲ್ಲಿ ನಿಗದಿತ ಪ್ರಮಾಣದ ಕನ್ನಡ ಪುಸ್ತಕಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ಆದೇಶ ಜಾರಿಗೆ ತರುವುದರ ಜೊತೆಗೆ, ಈಗಾಗಲೇ ಇರುವ ಸಾಂಪ್ರದಾಯಿಕ ಪದ್ಧತಿಯ ಹಾರ ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆಗಳಿಗೂ ಅವಕಾಶ ನೀಡುವುದು ಸೂಕ್ತ. ಇಂತಹ ಸುತ್ತೋಲೆಗಳನ್ನು ಹೊರಡಿಸುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆದು, ಜನ ಹಿತವೆನಿಸುವ ನಿಯಮಾವಳಿಗಳು ಜಾರಿಗೆ ಬರಲಿ. ಪುಸ್ತಕ ಪ್ರೇಮದೊಟ್ಟಿಗೆ ಜೀವಪರ ಕಾಳಜಿಯ ಚಿಂತನೆಗಳೂ ಎಲ್ಲರಲ್ಲಿ ಮೂಡಬೇಕಿದೆ.