ಇಂದು ಆರೋಗ್ಯ ಸೇವೆ ನಗರಕೇಂದ್ರಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಲೋಪಥಿ ವೈದ್ಯರು ಅಗತ್ಯ ಪ್ರಮಾಣದಲ್ಲಿ ಲಭ್ಯರಿರುವುದಿಲ್ಲ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಅಲೋಪಥಿ ವೈದ್ಯರು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು ನಾನಾ ನೆಪಗಳಿಂದ ಗ್ರಾಮೀಣ ಸೇವೆಯಿಂದ ವಿಮುಖವಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ.
ಅಲೋಪಥಿ ವೈದ್ಯ ಪದ್ಧತಿಯ ಆಸ್ಪತ್ರೆಯಲ್ಲಿ ಕಲಿಕಾ ವೈದ್ಯರಾಗಿ ತರಬೇತಿ ಪಡೆದರೂ ಪಠ್ಯಕ್ರಮದಲ್ಲಿ ಅಭ್ಯಸಿಸಿದ್ದರೂ ಆಯುಷ್ ವೈದ್ಯರಿಗೆ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಅಲೋಪಥಿಯಂತೆ ಚಿಕಿತ್ಸೆ ನೀಡುವಲ್ಲಿ ಕಾನೂನಿನ ತೊಡಕಿದೆ. ಆದ್ದರಿಂದ ಚಿಕಿತ್ಸೆಯನ್ನು ‘ಪ್ರಾಥಮಿಕ ಹಾಗೂ ಉನ್ನತ’ ಹಂತಗಳಲ್ಲಿ ವಿಭಾಗಿಸಿ, ಪ್ರಾಥಮಿಕ ಹಂತದಲ್ಲಿ ಆಯುಷ್ ವೈದ್ಯರೂ ಅಲೋಪಥಿ ಪದ್ಧತಿಯಲ್ಲಿ ಧೈರ್ಯದಿಂದ ಚಿಕಿತ್ಸೆ ನೀಡುವಂತೆ ಕಾನೂನು ಮಾರ್ಪಾಡು ಮಾಡಬೇಕು.
ಇದರಿಂದ ಹಲವು ಅನುಕೂಲಗಳಿವೆ. ಸಮ್ಮಿಶ್ರ ವೈದ್ಯ ಪದ್ಧತಿಯ ಉಗಮದಿಂದ ರೋಗಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಉಪಚಾರ ಲಭ್ಯವಾಗುತ್ತದೆ. ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಕಡಿಮೆ ಸಂಬಳದಲ್ಲಿ ಆಯುಷ್ ವೈದ್ಯರ ನಿಯುಕ್ತಿಗೆ ಅವಕಾಶ ಇರುವುದರಿಂದ, ವೈದ್ಯಕೀಯ ವೆಚ್ಚದಲ್ಲಿ ಗಣನೀಯ ಇಳಿಕೆ ಸಾಧ್ಯತೆ. ಸಹಕಾರಿ ತತ್ವದಲ್ಲಿ ವೈದ್ಯರೇ ಮಾಲೀಕರಾದ ಆಸ್ಪತ್ರೆಗಳು ಮರುಹುಟ್ಟಿ, ಮುಂದೊಂದು ದಿನ ವೈದ್ಯಕೀಯ ಕ್ಷೇತ್ರವು ಬಂಡವಾಳಶಾಹಿಯ ಕಪಿಮುಷ್ಟಿಯಿಂದ ಮುಕ್ತ ಆಗಬಹುದು.
ಡಾ. ಚೇತನಾ, ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.