ಈ ಹೆಗ್ಗಳಿಕೆ ಏನೇ ಇರಲಿ, ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯವಾಗಲಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸ್ಥಳೀಯ ಶಾಖೆಯಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ, ಕನ್ನಡ ಸಾಹಿತ್ಯ ಪರಿಷತ್ ಆಗಲಿ ಅಥವಾ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಕ್ರಿಯವಾಗಿರುವ ಗಾಂಧಿ ಪೀಠಗಳಾಗಲಿ ಈ ಕೃತಿಯ ಬಗ್ಗೆ ವಿಚಾರ ಸಂಕಿರಣವಿರಲಿ ಒಂದು ಕಿರು ಚರ್ಚೆ ಏರ್ಪಡಿಸಿದ್ದೂ ನನ್ನ ಗಮನಕ್ಕೆ ಬಂದಿಲ್ಲ. ವಿಚಾರ ಸಂಕಿರಣ, ಚರ್ಚೆಯಂತಹ ಗೌರವ ಬರೇ ಇದೊಂದೇ ಪುಸ್ತಕಕ್ಕೆ ಎಂದಲ್ಲ, ಆಯಾ ವರ್ಷ ಉನ್ನತ ಪ್ರಶಸ್ತಿ– ಪುರಸ್ಕಾರ ಪಡೆದ ಎಲ್ಲ ಕೃತಿಗಳಿಗೂ ಸಲ್ಲಬೇಕು.