ಆದರೆ ನಿಗಮದ ಸ್ಥಾಪನೆಯ ಹಿಂದೆ, ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರುವ ದೃಷ್ಟಿಕೋನವಿರಬೇಕೇ ವಿನಾ ಅದೊಂದು ಚುನಾವಣಾ ತಂತ್ರವಾಗಬಾರದು. ನಿಗಮದ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಕೂಡಲೇ ಚಾಲನೆ ನೀಡಬೇಕು. ಅದಕ್ಕೆ ಮುನ್ನ ಕಾಡುಗೊಲ್ಲ ಬುಡಕಟ್ಟಿನ ಮುಖಂಡರು, ಸಂಸ್ಕೃತಿ ಚಿಂತಕರು, ಅಭಿವೃದ್ಧಿ ಮೀಮಾಂಸಕರು, ಕಾಡುಗೊಲ್ಲ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಮುಕ್ತ ಸಮಾಲೋಚನೆ ನಡೆಸುವುದು ಅತ್ಯವಶ್ಯಕ.