ಕನ್ನಡದ ಅಭಿಮಾನ, ಭಾವೋದ್ವೇಗ ಇವುಗಳನ್ನೆಲ್ಲ ಪಕ್ಕಕ್ಕಿಟ್ಟು, ವಾಸ್ತವಾಂಶಗಳಿಂದ ನೋಡಿದರೂ ಕನ್ನಡದಲ್ಲಿ ವ್ಯವಹರಿಸಿದರೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಯಾವುದೇ ಗೊಂದಲವಿರುವುದಿಲ್ಲ. ಇಲ್ಲದಿದ್ದರೆ ಪತ್ರವನ್ನೇ ಓದದೆ ಕೊನೆಯಲ್ಲಿ ಕಾಣಿಸುವ ಅಂಕಿಯಷ್ಟು ಹಣವನ್ನು ಕೊಟ್ಟು ತೆಪ್ಪಗಿರಬೇಕಾಗುತ್ತದೆ. ಬೇಕಿದ್ದರೆ ಎರಡನೇ ಆಯ್ಕೆಯಲ್ಲಿ ಇಂಗ್ಲಿಷ್ ಇರಲಿ. ಆದರೆ ಕನ್ನಡದ ಜಾಗವನ್ನು ಬೇರೆ ಭಾಷೆಗಳು ಆಕ್ರಮಿಸುವುದು ಖಂಡನೀಯ. ಈ ಸಂದರ್ಭದಲ್ಲಿ ತೇಜಸ್ವಿಯವರ ಒಂದು ಮಾತು ನೆನಪಿಗೆ ಬರುತ್ತದೆ. ಕಾಳಿದಾಸ, ಬಾಣ, ಭವಭೂತಿಯಂತಹ ಮಹಾನ್ ಕವಿಗಳು ಮಹಾಕಾವ್ಯಗಳನ್ನು ಬರೆದಿದ್ದರೂ ಸಂಸ್ಕೃತ ಮಾಯವಾಯಿತು. ಸಾಮಾನ್ಯ ಜನ ತಮ್ಮ ನಿತ್ಯದ ವ್ಯವಹಾರಗಳಲ್ಲಿ ಸಂಸ್ಕೃತವನ್ನು ಬಳಸದೇ ಹೋದದ್ದು ಇದಕ್ಕೆ ಕಾರಣ. ಹಾಗೆಯೇ ನಮ್ಮ ಕನ್ನಡವನ್ನು ದಿನನಿತ್ಯದ ವ್ಯವಹಾರದಲ್ಲಿ ಬಳಸದೇ ಹೋದರೆ ಕನ್ನಡವೂ ಸಂಸ್ಕೃತದ ಹಾದಿ ಹಿಡಿಯುತ್ತದೆ.