ಈ ತರಹದ ಬಾಲಿಶ ಮಾತುಗಳಿಂದಲೇ, ಜನರಿಗೆ ಕಾಂಗ್ರೆಸ್ ಬದಲು ಟಿಎಂಸಿ, ಎಎಪಿ ಪಕ್ಷಗಳು ಆಶಾದಾಯಕವಾಗಿ ಕಾಣುತ್ತಿವೆ. ಮುಂದಿನ ವರ್ಷಗಳಲ್ಲಿ ನಡೆಯಲಿರುವ ಚುನಾವಣೆಗೆಬಿಜೆಪಿ ಎಲ್ಲ ತಯಾರಿ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕತ್ವಕ್ಕೆ, ಪಕ್ಷದ ಅಧ್ಯಕ್ಷ ಸ್ಥಾನ ‘ಹಿಡಿದಿಟ್ಟುಕೊಳ್ಳುವ’ ಬಗ್ಗೆ, ಪಕ್ಷದ ಘಟಾನುಘಟಿ ಪ್ರಬುದ್ಧರನ್ನು ಪಂಜರದ ಗಿಣಿಗಳಂತೆ ಇಟ್ಟು ನೇಪಥ್ಯಕ್ಕೆ ತಳ್ಳುವುದರ ಬಗ್ಗೆಯೇ ಆಸಕ್ತಿ. ಪಕ್ಷವನ್ನು ಬಲಪಡಿಸಬೇಕೆಂಬ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ದುರಂತವೆಂದರೆ, ಪ್ರಬುದ್ಧರ ಬದಲು, ಕಾಂಗ್ರೆಸ್ ಪಕ್ಷದ ‘ಎರಡನೇ ಸಾಲಿನ ವಕ್ತಾರರು’ ನಾಯಕರಂತೆ ಮಿಂಚುತ್ತಿದ್ದಾರೆ. ಹಿರಿಯ ವಾಗ್ಮಿಗಳು, ಪ್ರಬುದ್ಧರನ್ನು ನೇಪಥ್ಯಕ್ಕೆ ಸರಿಸಿರುವುದರಿಂದ, ಕಾಂಗ್ರೆಸ್ಸಿಗೆ ಬೆಲೆ ಇಲ್ಲದಾಗಿದೆ ಎಂಬುದು ಅರಿವಾಗಿಲ್ಲ. ಈ ಸ್ಥಿತಿಯಲ್ಲಿ ಪಕ್ಷವು ಮುಂದೆ ಅಧಿಕಾರ ಪಡೆಯುವುದು ಭ್ರಮೆಯೆಂದು ತಿಳಿದು ಪಕ್ಷದವರೇ ಬೇರೆ ಪಕ್ಷಗಳಿಗೆ ಧಾವಿಸುತ್ತಿದ್ದಾರೆ. ಕಾಂಗ್ರೆಸ್ನ ಸ್ವಾರ್ಥ ನಾಯಕತ್ವದ ಕಾರಣ, ರಾಜ್ಯಗಳ ನಾಯಕರ ಮೇಲೆ ಹತೋಟಿ ಇಲ್ಲದಾಗಿದೆ.