ಖಾಲಿ ಇರುವ ಸರ್ಕಾರಿ ಹುದ್ದೆಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಟು ಹುದ್ದೆ ಕಾಯ್ದಿರಿಸಲು 1977ರ ಕರ್ನಾಟಕ ನಾಗರಿಕಸೇವೆಗಳ ನಿಯಮಾವಳಿಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ಗೆ ಮಾಹಿತಿ ನೀಡಿದೆ (ಪ್ರ.ವಾ., ಜೂನ್ 20). ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಲಿಂಗವನ್ನು ಆಧರಿಸಿದ ತಾರತಮ್ಯವನ್ನು ಸಮರ್ಥಿಸಲಾಗುವುದಿಲ್ಲ. ತೃತೀಯ ಲಿಂಗಿಗಳಿಗೆ ಸರ್ಕಾರಿ ಉದ್ಯೋಗ ಗಳಲ್ಲಿ ಮೀಸಲಾತಿ ಕಲ್ಪಿಸುವುದು ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವ ದಿಸೆಯಲ್ಲಿ ಒಂದು ಪ್ರಮುಖ ಹೆಜ್ಜೆ. ಲಿಂಗಪರಿವರ್ತಿತರು ಸಾಮಾನ್ಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಾದ್ದರಿಂದ, ಮೀಸಲಾತಿಯೆಂಬ ಪ್ರಾತಿನಿಧ್ಯದ ಮೂಲಕ ಸಾರ್ವಜನಿಕರ ಮಧ್ಯೆ ಗೌರವಾನ್ವಿತ ಬದುಕನ್ನು ಕಟ್ಟಿಕೊಳ್ಳುವ ಅವಕಾಶವನ್ನು ಅವರಿಗೆ ಕಲ್ಪಿಸಿದಂತಾಗುತ್ತದೆ.