ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಅಪಘಾತವು ಸಾರ್ವಜನಿಕವಾಗಿ ಹಲವಾರು ಚರ್ಚೆಗಳಿಗೆ ಇಂಬು ಕೊಟ್ಟಿದೆ. ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವುದೇ ಪ್ರಯಾಣಿಕರ ಸಾವಿಗೆ ಪ್ರಮುಖ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಸೀಟ್ ಬೆಲ್ಟ್ ಧರಿಸುವುದರಿಂದ ಬಹಳಷ್ಟು ಪ್ರಾಣಹಾನಿ, ಗಾಯಗಳ ತೀವ್ರತೆಯನ್ನು ತಗ್ಗಿಸಬಹುದಾದರೂ ಅದೇ ಒಂದು ಪ್ರಮುಖ ಕಾರಣ ಎನ್ನುವುದನ್ನು ಸಂಪೂರ್ಣ ಒಪ್ಪಲಾಗದು. ಕೇಂದ್ರ ರಸ್ತೆ ಸಾರಿಗೆ ಸಚಿವರು ‘ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಿಸಿದ್ದು, ಬಳಕೆದಾರರು ಟೋಲ್ ಪಾವತಿಸಲೇಬೇಕು’ ಎಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಗ್ರಾಮೀಣ ರಸ್ತೆಗಳನ್ನು ಬಿಡಿ, ಅಂತರರಾಷ್ಟ್ರೀಯ ಗುಣಮಟ್ಟದ ಹೆಗ್ಗಳಿಕೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಬಹಳಷ್ಟು ಕಡೆ ಒಂದರಿಂದ ಮೂರು ಅಡಿಯವರೆಗೆ ಗುಂಡಿಗಳು ಬಿದ್ದಿರುವುದನ್ನು ರಸ್ತೆ ಮಾರ್ಗ ಬಳಸುವ ಯಾರಾದರೂ ಗಮನಿಸಬಹುದು. ಗುಂಡಿ ತಪ್ಪಿಸಲು ಹೋಗಿ ರಸ್ತೆ ಬಳಕೆದಾರರು ಪ್ರಾಣ ತೆತ್ತ, ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಅಸಂಖ್ಯ.