ಮಹಾರಾಷ್ಟ್ರದಿಂದ ಬರುವ ಬಸ್ ಪ್ರಯಾಣಿಕರಿಗೆ ಗಡಿಯಲ್ಲಿ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದ ಕರ್ನಾಟಕ ಪೊಲೀಸರ ನಡೆ ಶ್ಲಾಘನೀಯ. ಕರ್ನಾಟಕದ ಬಸ್ಗಳಿಗೆಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಸಿ ಬಳಿಯುವುದು, ಕಲ್ಲು ಎಸೆಯುವುದನ್ನು ಅಲ್ಲಿನ ಕೆಲ ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಲ್ಲಿನ ಬದಲು ಹೂವು ನೀಡಿ ನಮ್ಮವರು ಸ್ವಾಗತ ನೀಡಿರುವುದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ದೇಶದ ಯಾವುದೇ ಒಬ್ಬ ನಾಗರಿಕ ದೇಶದ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸುವ, ವಾಸಿಸುವ, ವ್ಯಾಪಾರ ಮಾಡುವ ಸವಲತ್ತನ್ನು ನಮ್ಮ ಸಂವಿಧಾನ ಕೊಟ್ಟಿದೆ.