ಅದಿರಲಿ, ಇಂಥ ಯಂತ್ರದಿಂದ ಆಗಬಹುದಾದ ಅನಾಹುತಗಳನ್ನಾದರೂ ತಿಳಿಯಬೇಡವೇ? ಈ ಹಿಂದೆ ಕರಾವಳಿ ಭಾಗದಲ್ಲಿ ಗೇರು (ಗೋಡಂಬಿ) ಕೃಷಿಗೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸಿಂಪಡಿಸಲಾಗಿತ್ತು. ಅದರ ಪರಿಣಾಮ ಏನಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಅಂಥದ್ದೇ ಯಂತ್ರಗಳನ್ನು ಹೊಂದುವುದು ಅಭಿವೃದ್ಧಿಯ ಸಂಕೇತವೆಂದು ಭಾವಿಸಬಹುದೇ? ಕೃಷಿ ಮೇಳದಲ್ಲಿ ಯಂತ್ರಗಳಿಗೆ ಇಷ್ಟೊಂದು ಪ್ರಾಶಸ್ತ್ಯ ಕೊಟ್ಟಿದ್ದು ಸರಿ ಕಾಣಿಸುವುದಿಲ್ಲ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡುಕೊಳ್ಳುತ್ತಿರುವ ಈಗಿನ ಸಂದರ್ಭದಲ್ಲಿ, ರೈತರಿಗೆ ಧೈರ್ಯ ತುಂಬುವ, ಹೆಚ್ಚಿನ ವೆಚ್ಚವಿಲ್ಲದೆಯೂ ಸ್ವಾವಲಂಬನೆ ಸಾಧಿಸುವ ವಿಧಾನವನ್ನು ತಿಳಿಸಿಕೊಡುವತ್ತ ಗಮನಹರಿಸಿದ್ದರೆ ಕೃಷಿ ಮೇಳ ರೈತರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು.