ಒಂದೊಂದು ಭಾಷೆಗೆ ಹಿರಿಯ ವಿದ್ವಾಂಸರೊಬ್ಬರ ನೇತೃತ್ವದಲ್ಲಿ ಅನುವಾದ ಮಂಡಳಿಯನ್ನೂ ರೂಪಿಸಲಾಗಿತ್ತು. ಒಂದು ಭಾಷೆಯ ಅನುವಾದಕ ಮಂಡಳಿಯ ಸದಸ್ಯನಾಗಿ ದುಡಿದು, ಕನಕ ಸಾಹಿತ್ಯದ ರೋಮಾಂಚನವನ್ನು ನಾನೂ ಅನುಭವಿಸಿದ್ದೇನೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಗಾಗ ಸಭೆಗಳನ್ನು ಮಾಡಿ, ಅನುವಾದದ ಪ್ರಗತಿ ಪರಿಶೀಲಿಸಲಾಗುತ್ತಿತ್ತು. ಆದಷ್ಟು ಬೇಗ ಅನುವಾದದ ಕೆಲಸಗಳನ್ನು ಮುಗಿಸಿಕೊಡುವಂತೆ ಅನುವಾದಕರಲ್ಲಿ ವಿನಂತಿಸಲಾಗಿತ್ತು. ಆದುದರಿಂದ ಬಹುತೇಕ ಭಾಷೆಗಳ ಅನುವಾದ ಕೆಲಸ ಮುಗಿದು, ಅನೇಕ ತಿದ್ದುಪಡಿಗಳಾಗಿ ಕನಕದಾಸರ ಸಮಗ್ರ ಸಾಹಿತ್ಯವು ಪ್ರಕಟಣೆಯ ಬಾಗಿಲಲ್ಲಿ ನಿಂತು ಇಂದಿಗೆ ಸುಮಾರು ಎರಡೂವರೆ ವರ್ಷಗಳಾದವು. ಆದರೂ ‘ಮುದ್ರಣ ಭಾಗ್ಯ’ ಆ ಕೃತಿಗಳಿಗೆ ದೊರೆತಿಲ್ಲ. ಇದರ ಹಿಂದೆ ಇರುವ ರಾಜಕೀಯ ಕಿತ್ತಾಟವೇನು ಎಂದು ಅರ್ಥವಾಗುತ್ತಿಲ್ಲ.