ನಮ್ಮ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗಿ ದಶಕಗಳೇ ಕಳೆದಿವೆ. ಆದರೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಬಹುಮತ ಲಭಿಸದೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ರಾಜಕೀಯ ಮೇಲಾಟಗಳು ಆರಂಭವಾಗುತ್ತವೆ, ತಂತ್ರ– ಕುತಂತ್ರಗಳು ನಡೆಯುತ್ತವೆ. ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಗೆದ್ದು ಬಂದ ನಂತರ ಅವರು ಆಡುವ ಆಟವನ್ನು ನೋಡುತ್ತಾ ಮತದಾರರು ತಲೆ ಚಚ್ಚಿಕೊಳ್ಳಬೇಕಾದ ಸ್ಥಿತಿ ಈಗ ನಿರ್ಮಾಣವಾಗಿದೆ. ಶ್ರೀಮಂತರು, ಪ್ರಭಾವಿ ಉದ್ಯಮಿಗಳು ಮತ್ತು ಜಾತಿಯ ಬಲ ಹೊಂದಿರುವವರು ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರಜಾಪ್ರಭುತ್ವ ನಾಚುವಂತೆ ರಾಜಕೀಯದ ಆಟವಾಡಿಸುತ್ತಾರೆ.