ರಾಜ್ಯದ ಈ ಹಿಂದಿನ ಸಮ್ಮಿಶ್ರ ಸರ್ಕಾರವು ಸಾಲಮನ್ನಾ ಮಾಡಿದ್ದರ ಪ್ರಯೋಜನ ಪಡೆದ ಹುಬ್ಬಳ್ಳಿ ತಾಲ್ಲೂಕಿನ ಹಿರೇಸೂರದ ರೈತ ಗೋವಿಂದಪ್ಪ ಶ್ರೀಹರಿ ಅವರು ಕೃತಜ್ಞತಾಪೂರ್ವಕವಾಗಿ, ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೋಳದ ರೊಟ್ಟಿಯ ಪಾರ್ಸಲ್ ಕಳುಹಿಸಿದ್ದಾರೆ (ಪ್ರ.ವಾ., ಡಿ. 19). ತಮ್ಮ ಹೊಲದಲ್ಲಿ ಬೆಳೆದ ಜೋಳದಿಂದ ರೊಟ್ಟಿ ಮಾಡಿ ಕಳುಹಿಸುವ ಮೂಲಕ ಅವರು ಧನ್ಯತಾಭಾವ ಮೆರೆದಿದ್ದಾರೆ. ರೈತರ ಇಂತಹ ಕೃತಜ್ಞತಾ ಮನೋಭಾವಕ್ಕೆ ಸಾಟಿ ಇಲ್ಲ. ಹಿಂದೆ ತಾವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಪತ್ರ ಬರೆದಿದ್ದ ಗೋವಿಂದಪ್ಪ ಅವರ ನೋವಿಗೆ ಕ್ಷಣಾರ್ಧದಲ್ಲಿ ಕರೆ ಮಾಡಿ ಸಾಂತ್ವನ ಹೇಳಿದ್ದ ಕುಮಾರಸ್ವಾಮಿ ಅವರ ನಡೆ ಕೂಡ ಶ್ಲಾಘನೀಯ. ರೈತ ಬಯಸುವುದು ಸಹ ಇಂತಹ ಸಾಂತ್ವನ, ಸ್ವಲ್ಪ ಮಟ್ಟಿನ ಸಹಾಯವನ್ನು. ಸಹಾಯಕ್ಕೆ ಆಭಾರಿಯಾದ ಗೋವಿಂದಪ್ಪ ಅವರ ಮನೋಭಾವ ಮಾದರಿಯಾಗುವಂತಹದ್ದು.