ನೀರು ಜೀವಾಮೃತ, ನೀರಿಲ್ಲದೆ ಬದುಕಿಲ್ಲ ಎಂಬುದನ್ನು ಪುನಃ ಪುನಃ ಹೇಳಬೇಕಾಗಿ ಬಂದಿದೆ. ನೀರಿನಿಂದಲೇ ನಾಗರಿಕತೆಯ ಅಳಿವು, ಉಳಿವು ಎಂಬುದನ್ನೇ ನಾವು ಮರೆಯಬೇಕೇ? ಸಾಮಾನ್ಯ ಜ್ಞಾನವೂ ನಮಗೆ ಇಲ್ಲವಾಯಿತೇ? ಕೊಳವೆ ಬಾವಿ ಕೊರೆದು ಭೂಮಿ ತಾಯಿಯ ಗರ್ಭವನ್ನೇ ಬರಿದು ಮಾಡಿದರೂ ತಿಳಿವಳಿಕೆ ಇಲ್ಲವಾಗಿದೆ. ಮುಂದಿನ ಪೀಳಿಗೆಗೆ ಕಂಟಕವಾಗಲಿರುವ ನೀರಿನ ಗಂಭೀರ ಸಮಸ್ಯೆಯನ್ನು ಕೂಲಂಕಷವಾಗಿ ಶಿಕ್ಷಣದಲ್ಲಿ ಅಳವಡಿಸುವುದರ ಜೊತೆಗೆ, ಈ ಬಗ್ಗೆ ಯುವಜನರಿಗೆ ಅರಿವು ಮೂಡಿಸದೇ ಇರುವುದು ಸರ್ಕಾರಗಳ ವೈಫಲ್ಯ. ಈಜುಕೊಳಗಳ ಬಗ್ಗೆ ಇರುವ ಅತೀವ ಆಸಕ್ತಿಯು ನೀರಿನ ಉಳಿತಾಯ ಹಾಗೂ ಅದರ ಸಮರ್ಪಕ ನಿರ್ವಹಣೆ ಬಗ್ಗೆ ಇಲ್ಲ. ಹಾಗೆಂದು ಏನೂ ಕೆಲಸವೇ ನಡೆಯುತ್ತಿಲ್ಲ ಎನ್ನಲಾಗದು.ಆದರೆ ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಏನೇನೂ ಸಾಲದು. ನೀರಿನ ಸಮಸ್ಯೆ ಪರಿಹಾರಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.