ಒಂದು ವರ್ಗದ ಜನರಲ್ಲಿವಿಧವೆಯ ಕೇಶಮುಂಡನ ಮಾಡಿಸುವ ಪದ್ಧತಿ ಇತ್ತು. ಇದರ ಉದ್ದೇಶ ಹೆಣ್ಣನ್ನು ವಿರೂಪಗೊಳಿಸುವುದೇ ಆಗಿತ್ತು. ಸಂಪ್ರದಾಯಸ್ಥ ಹೆಂಗಸರು ದೇವರಿಗೆ ಮುಡಿ ಕೊಡಲು ಹರಕೆ ಹೊರುತ್ತಾರೆ. ಇವರಲ್ಲಿ ಬಹಳ ಮಂದಿ ಕೇಶಮುಂಡನ ಮಾಡಿಸಿಕೊಳ್ಳುವುದಿಲ್ಲ, ಬದಲಿಗೆ ನಾಲ್ಕೈದು ಕೂದಲು ಕತ್ತರಿಸುವ ‘ಹೂ ಮುಡಿ’ ಕೊಡುತ್ತಾರೆ. ಅಂದರೆ ಮಹಿಳೆಯರಿಗೆ ತಮ್ಮ ಕೂದಲಿನ ಮೇಲೆ ಅಷ್ಟೊಂದು, ಪ್ರೀತಿ, ಕಾಳಜಿ. ಆದರೆ, ಉದ್ದನೆಯ ಕೂದಲಿಗೆ ಹೆಸರಾಗಿದ್ದ, ಕೇರಳದ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್ ಅವರು ತಮ್ಮ ಕೂದಲನ್ನು, ಬಡ ಕುಟುಂಬಕ್ಕೆ ಸೇರಿದ, ಕ್ಯಾನ್ಸರ್ಪೀಡಿತ ಮಕ್ಕಳ ‘ವಿಗ್’ಗಾಗಿ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ (ಪ್ರ.ವಾ., ಸೆ. 26). ‘ಹಿಗ್ಗುವೆ ಏತಕೆ ಚೆಲುವಿನ ಹೆಣ್ಣೇ, ಕಡೆಗೀರೂಪಿಗೆ ಗತಿ ಮಣ್ಣೇ’ ಎಂಬ ಕವಿ ವಾಣಿಯಂತೆ, ‘ನನಗೆ ಸೌಂದರ್ಯ ಮುಖ್ಯವಲ್ಲ, ಅದು ಬದುಕಿನಲ್ಲಿ ಶಾಶ್ವತವೂ ಅಲ್ಲ’ ಎಂದು ಹೇಳಿರುವ ಅಪರ್ಣಾ, ಸಮಾಜಕ್ಕೆ ಮಾದರಿಯಾಗಿದ್ದಾರೆ.