ಮೂಡಿಗೆರೆಯಲ್ಲಿರುವ ‘ಮೂಡಿಗೆರೆ ಹ್ಯಾಂಡ್ಪೋಸ್ಟ್’, ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಂಕ್ಷಿಪ್ತ ಅಂಚೆ ವಿಳಾಸವಾಗಿತ್ತು. ಆದ್ದರಿಂದ ಸಾಂಸ್ಕೃತಿಕವಾಗಿ ಈ ಸ್ಥಳಕ್ಕೆ ಮೂಡಿಗೆರೆಯ ಸಾಹಿತ್ಯಾಸಕ್ತರು ವಿಶೇಷ ಮಹತ್ವ ಕೊಟ್ಟುಕೊಂಡು ಬಂದಿದ್ದಾರೆ. ಆದರೆ ಈಗ ಇಲ್ಲಿದ್ದ ಹಳೆಯ ರಸ್ತೆ ವಿಭಜಕ ವೃತ್ತದ ಕಟ್ಟೆಯು ಹೊಸದಾಗಿ ಜೀರ್ಣೋದ್ಧಾರವಾಗಿದ್ದು ಅದಕ್ಕೆ ತೇಜಸ್ವಿ ಅವರ ಹೆಸರಿಡಬೇಕೆಂಬ ಚರ್ಚೆಗಳು ಗರಿಗೆದರಿವೆ. ಹಾಗೆ ಹೆಸರಿಟ್ಟಿದ್ದೇ ಆದಲ್ಲಿ ಅದು ತೇಜಸ್ವಿ ಅವರ ವಿಚಾರ ಹಾಗೂ ಚಿಂತನೆಗಳಿಗೆ ಪೂರಕವಾಗಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ಇದೊಂದು ವೃತ್ತವಾದುದರಿಂದ ಇಲ್ಲಿ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಂಘ ಸಂಸ್ಥೆಗಳ ಬಾವುಟ, ಬಂಟಿಂಗ್ಸ್, ಬ್ಯಾನರ್ಗಳನ್ನು ಕಟ್ಟುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅದು ತೇಜಸ್ವಿ ಅವರ ಮೂಲ ವಿಚಾರಗಳಿಗೆ ತದ್ವಿರುದ್ಧವಾಗಿ ಬೇರೊಂದು ಆಯಾಮದ ಸಾಂಕೇತೀಕರಣಕ್ಕೆ ದಾರಿಯಾದಂತೆ ಆಗುತ್ತದೆ. ಆದ್ದರಿಂದ ವೃತ್ತಗಳಿಗೆ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳ ಹೆಸರಿಡುವ ಪರಿಕಲ್ಪನೆಯೇ ತಪ್ಪು. ಹೀಗಾಗಿ ಮೂಲ ಪ್ರಾದೇಶಿಕ ಸ್ಥಳ ಕೇಂದ್ರಿತವಾದ ಮೂಡಿಗೆರೆ ಹ್ಯಾಂಡ್ಪೋಸ್ಟ್ ಹೆಸರೇ ಹೆಚ್ಚು ಸೂಕ್ತವಾಗಿದೆ.