ಮೈಸೂರು ನಗರದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸಲು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಕೆಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಕೆಲವು ನಿರ್ಧಾರಗಳು ಸ್ವಾಗತಾರ್ಹವಾಗಿದ್ದರೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪರಿಸರವಾದಿಗಳೊಂದಿಗೆ ಸಚಿವರು ವಿಸ್ತೃತವಾದ ಚರ್ಚೆ ನಡೆಸಬೇಕಾಗಿದೆ. ಅದೇ ರೀತಿ ಪ್ರತಿವರ್ಷ ಆಚರಿಸಲಾಗುವ ನಾಡಹಬ್ಬ ದಸರೆಯನ್ನು ನಿರ್ವಹಿಸಲು ಒಂದು ಶಾಶ್ವತವಾದ ಸ್ವಾಯತ್ತ ಮಂಡಲಿ ರಚಿಸುವುದು ಈಗಿನ ತುರ್ತು ಅಗತ್ಯವಾಗಿದೆ. ಈ ಮಂಡಳಿಯು ಮೈಸೂರಿನ ರಾಜ ಪ್ರಮುಖರು, ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಗಣ್ಯ ನಾಗರಿಕರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಒಳಗೊಂಡಿರಬೇಕು.