ಬಿಎಂಶ್ರೀ ಪ್ರತಿಷ್ಠಾನಕ್ಕೆ ಸಂಬಂಧಿಸಿದಜಾಗದ ಗುತ್ತಿಗೆ ನವೀಕರಣಕ್ಕೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ಮೀನಮೇಷ ಎಣಿಸುತ್ತಿರುವುದು (ಪ್ರ.ವಾ., ಜುಲೈ 10) ದುರ್ದೈವದ ಸಂಗತಿ. ಈ ಕುರಿತಂತೆ ದಿವಂಗತ ಡಾ. ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಕಂಡಿದ್ದ ನಿಯೋಗದಲ್ಲಿ ನಾನೂ ಇದ್ದೆ. ಪ್ರತಿಷ್ಠಾನದ ಹಿಂದಿನ ಅಧ್ಯಕ್ಷನಾಗಿ ನಾನು ಎಡೆಬಿಡದೆ ಹಲವಾರು ವರ್ಷಗಳಿಂದ ಪ್ರಯತ್ನ ನಡೆಸಿದ್ದರೂ ಫಲಪ್ರದವಾಗದ ಕಾರ್ಯ ಈಗ ಕೈಗೂಡುತ್ತದೆ ಎಂಬ ಆಸೆಯು ಮುಖ್ಯಮಂತ್ರಿಯವರ ಆಶ್ವಾಸನೆಯಿಂದ ಉಂಟಾಗಿತ್ತು. ಆದರೆ ಇಷ್ಟು ತಿಂಗಳಾದರೂ ಅವರ ಭರವಸೆಗೂ ಬೆಲೆಯಿಲ್ಲವಾಗಿರುವುದು ದುರ್ದೈವ.